ಕರೋನಾ ಸಂಕಷ್ಟದ ಸಂದರ್ಭದಲ್ಲಿ ‘ವಾಸವಿ ಅನ್ನದಾನ ಸೇವಾ ಟ್ರಸ್ಟ್’ ನಿಂದ ಮಹತ್ವದ ಕಾರ್ಯ 07-05-2020 1:21PM IST / No Comments / Posted In: Corona, Corona Virus News, Karnataka, Latest News ದೇಶದಲ್ಲಿ ಕರೋನಾ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ದಿನೇ ದಿನೇ ಸೋಂಕು ಪೀಡಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಕರೋನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ದೇಶದಾದ್ಯಂತ ಲಾಕ್ಡೌನ್ ಜಾರಿಗೊಳಿಸಿದ್ದು, ಸೋಂಕು ಪೀಡಿತರ ಶುಶ್ರೂಷೆಗಾಗಿ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬೆಂಗಳೂರಿನ ಯಲಚೇನಹಳ್ಳಿಯಲ್ಲಿರುವ ವಾಸವಿ ಅನ್ನದಾನ ಸೇವಾ ಟ್ರಸ್ಟ್ ವತಿಯಿಂದ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 1 ಸಾವಿರ ಮಂದಿ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗೆ ಉಚಿತವಾಗಿ ಊಟವನ್ನು ಸರಬರಾಜು ಮಾಡಲಾಗುತ್ತಿದೆ. ವಿವಿ ಪುರಂನ ವಾಣಿವಿಲಾಸ ರಸ್ತೆಯಲ್ಲಿರುವ ವಾಸವಿ ಕನ್ವೆನ್ಷನ್ ಸೆಂಟರ್ ನಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸುತ್ತಿದ್ದು 5 ಕೆಲಸಗಾರರು ಹಾಗೂ 15 ಜನ ಸ್ವಯಂ ಸೇವಾ ಕಾರ್ಯಕರ್ತರು ಇದಕ್ಕಾಗಿ ಶ್ರಮಿಸುತ್ತಿದ್ದಾರೆ. ಈವರೆಗೆ 20 ಸಾವಿರ ಮಂದಿ ಉಚಿತ ಆಹಾರದ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಈ ಮೊದಲಿನಿಂದಲೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುವ ವಾಸವಿ ಅನ್ನದಾನ ಸೇವಾ ಟ್ರಸ್ಟ್, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿ ಮತ್ತು ಅವರೊಂದಿಗಿರುವ ಓರ್ವ ಸಹಾಯಕರಿಗೆ ಆಹಾರ ಸರಬರಾಜು ಮಾಡುತ್ತ ಬಂದಿದ್ದು, ಅಲ್ಲದೆ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಒಂದು ತಿಂಗಳಿಗೆ 25,000 ರೂಪಾಯಿಗಳ ಸಹಾಯ ಧನ ನೀಡಲಾಗುತ್ತಿದೆ. ಸಂಸ್ಥೆಯ ಅಧ್ಯಕ್ಷ ಪತ್ತಿ ಸೀತಾರಾಮಯ್ಯ, ಗೌರವಾಧ್ಯಕ್ಷ ಮಾನಂದಿ ರಮೇಶ್, ಟ್ರಸ್ಟಿ ಮಾಲೂರು ಕೃಷ್ಣಯ್ಯ ಶ್ರೇಷ್ಠಿ, ಉಪಾಧ್ಯಕ್ಷ ಯುವರಾಜ್, ಕಾರ್ಯದರ್ಶಿ ರಾಮಸ್ವಾಮಿ, ಖಜಾಂಚಿ ನಾಗಮನೋಹರ್, ಮ್ಯಾನೇಜರ್ ಜಯಮಾಲಾ ಸೇರಿದಂತೆ ಸಿಬ್ಬಂದಿ ವರ್ಗ ಇಂತಹ ಒಂದು ಮಹತ್ವದ ಕಾರ್ಯದಲ್ಲಿ ಸಾರ್ವಜನಿಕರು ಅಭಿನಂದಿಸಿದ್ದಾರೆ.