ದೇಶಕ್ಕೆ ವಕ್ಕರಿಸಿಕೊಂಡಿರುವ ಕೊರೊನಾ ಮಹಾಮಾರಿಗೆ ಸದ್ಯಕ್ಕೆ ಲಸಿಕೆ ಲಭ್ಯವಿಲ್ಲ. ಇದರ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಗೊಳಿಸಿದ್ದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗುತ್ತಿದೆ.
ರೋಗ ನಿರೋಧಕ ಶಕ್ತಿ ಹೊಂದಿರುವವರಿಗೆ ಈ ಮಾರಣಾಂತಿಕ ಸೋಂಕು ತಗುಲುವುದಿಲ್ಲ ಎನ್ನಲಾಗಿದ್ದು, ಇದರ ಮಧ್ಯೆ ರಾಜ್ಯ ಆಯುಷ್ ಇಲಾಖೆ ಕೊರೊನಾ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಷಾಯವನ್ನು ಬಿಡುಗಡೆ ಮಾಡಿದೆ.
ಜೋಶಾಂದ ಎಂಬ ಹೆಸರಿನ ಈ ಕಷಾಯವನ್ನು ಉಚಿತವಾಗಿ ನೀಡುತ್ತಿದ್ದು, ಕ್ವಾರಂಟೈನ್ ನಲ್ಲಿ ಇರುವವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಕಷಾಯದ ಜೊತೆಗೆ ಅರ್ಕ್ ಎ ಅಜೀಬ್ ಎಂಬ ಪದಾರ್ಥವನ್ನು ಆಯುಷ್ ಇಲಾಖೆ ಸಿದ್ಧಪಡಿಸಿದ್ದು, ಈ ದ್ರಾವಣವನ್ನು ಟಿಶ್ಯೂ ಪೇಪರ್ ಅಥವಾ ಕರ್ಚಿಪ್ ಮೇಲೆ ಹಾಕಿಕೊಂಡು ಅದರ ಸುವಾಸನೆಯನ್ನು ತೆಗೆದುಕೊಳ್ಳಬೇಕಿದೆ. ಅಲ್ಲದೆ ಈ ದ್ರಾವಣವನ್ನು ಬಿಸಿನೀರಿಗೆ ಹಾಕಿ ಅದರ ಹಬೆಯನ್ನು ತೆಗೆದುಕೊಂಡರೆ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ ಎಂದು ಹೇಳಲಾಗಿದೆ.