ಮಾರಣಾಂತಿಕ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಲಾಕ್ ಡೌನ್ ನಿಂದಾಗಿ ಬಹುತೇಕ ಎಲ್ಲ ವರ್ಗದ ಜನತೆ ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಇಂಥವರ ನೆರವಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಧಾವಿಸಿದ್ದು, ಇದರ ಜೊತೆಗೆ ಉದ್ಯಮಿಗಳೂ ಸಹ ಸಹಾಯ ಹಸ್ತ ಚಾಚಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಶಂಭೂರು ಸಮೀಪದ ಎರಕಳ ಮೂಲದ ಉದ್ಯಮಿ ಎರಕಳ ರಘುನಾಥ ಸೋಮಯಾಜಿ 100 ಮಂದಿ ಅರ್ಚಕರು, ಅಡುಗೆಯವರು ಹಾಗೂ ಅವರ ಸಹಾಯಕರಿಗೆ ತಲಾ ಐದು ಸಾವಿರ ರೂಪಾಯಿ ನಗದು ನೀಡಿದ್ದಾರೆ.
ಲಾಕ್ ಡೌನ್ ಕಾರಣದಿಂದಾಗಿ ದೇವಾಲಯಗಳ ಬಾಗಿಲು ಮುಚ್ಚಿದ್ದು, ಮದುವೆ, ಉಪನಯನ ಮೊದಲಾದ ಶುಭ ಸಮಾರಂಭಗಳು ಸಹ ಸ್ಥಗಿತಗೊಂಡಿವೆ. ಹೀಗಾಗಿ ಅಂತವರಿಗೆ ಸಹಾಯಹಸ್ತ ಚಾಚಿರುವ ರಘುನಾಥ ಸೋಮಯಾಜಿ ಸಂತ್ರಸ್ತರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ.