ಇಂದು ವಿಶ್ವ ತಾಯಂದಿರ ದಿನ. ಇದರ ಅಂಗವಾಗಿ ಬಹುತೇಕರು ತಮ್ಮ ತಾಯಿಯನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ಇದರ ನಡುವೆ ರಾಮನಗರ ಜಿಲ್ಲೆ ಸಾತನೂರಿನ ಕೆಮ್ಮಾಳೆ ಗ್ರಾಮದವರಾದ ಗೋಪಾಲ್ ತಮ್ಮ ಸಹೋದರರೊಂದಿಗೆ ಸೇರಿ ತಾಯಿಗಾಗಿ ದೇಗುಲವನ್ನೇ ಕಟ್ಟಿಸಿದ್ದಾರೆ.
ಇವರ ತಾಯಿ ಚೆನ್ನಾಜಮ್ಮ 2007ರ ಸೆಪ್ಟೆಂಬರ್ 9ರಂದು ನಿಧನರಾಗಿದ್ದು, ಹೀಗಾಗಿ ಕೆಮ್ಮಾಳೆ ಗ್ರಾಮದಲ್ಲಿನ ಮೂರು ಎಕರೆ ಜಮೀನಿನಲ್ಲಿ ಪಾರ್ಕ್ ನಿರ್ಮಿಸಿ ಅದರೊಳಗೆ ಈ ದೇಗುಲ ಕಟ್ಟಿಸಿದ್ದಾರೆ. ಅಲ್ಲದೆ ತಾಯಿ ಹೆಸರಿನಲ್ಲಿ ದತ್ತಿ ಪ್ರತಿಷ್ಠಾನ ಸ್ಥಾಪಿಸಿ ಶಂಕರ ಕಣ್ಣಿನ ಆಸ್ಪತ್ರೆಯ ಸಹಯೋಗದೊಂದಿಗೆ ಸುಮಾರು 35 ಸಾವಿರ ಜನರ ಕಣ್ಣಿನ ಸರ್ಜರಿಗೆ ನೆರವು ನೀಡಿದ್ದಾರೆ.
ತಮಗೆ ತಾಯಿ ಕಲಿಸಿದ ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ನೆನಪಿಸುವ ಉದ್ದೇಶದಿಂದ ಈ ದೇಗುಲವನ್ನು ಸ್ಥಾಪಿಸಿದ್ದೇವೆ ಎಂದು ಹೇಳುವ ಗೋಪಾಲ್, ತಾಯಿಯ ನೆನಪಿನಲ್ಲಿ ಸಮಾಜ ಸೇವೆಯನ್ನು ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದ್ದಾರೆ.