ಕೊರೊನಾ ಸೋಂಕಿತರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದಾರೆ. ಅತ್ತ ಸೋಂಕಿತರ ಸಂಖ್ಯೆ ಹೆಚ್ಚಾದಂತೆ ರೈಲು, ಬಸ್ಸಿನಲ್ಲಿ ಪ್ರಯಾಣ ಮಾಡುವುದಕ್ಕೂ ಜನ ಹೆದರುವಂತಾಗಿದೆ. ಇದರ ಬೆನ್ನಲ್ಲೇ ಸೋಂಕಿತರ ಮಾಹಿತಿ ಕಲೆ ಹಾಕುವಲ್ಲಿ ಆಗಾಗ ಅಧಿಕಾರಿಗಳು ಎಡವಟ್ಟು ಮಾಡುತ್ತಿದ್ದಾರೆ.
ಇದೀಗ ಮತ್ತೊಂದು ಎಡವಟ್ಟಿನಿಂದಾಗಿ ರೈಲಿನಲ್ಲಿದ್ದ ಮಂದಿಗೆ ಸಂಕಷ್ಟ ಎದುರಾಗಿದೆ. ಹೌದು, ನಾಗಪುರದಿಂದ ಬಂದಿದ್ದ ಈ ಮಹಿಳೆ ಗದಗ್ ಗೆ ಹೋಗಬೇಕಾಗಿತ್ತು. ಇದಕ್ಕಾಗಿ ಬೆಂಗಳೂರು-ಬೆಳಗಾವಿ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಆದರೆ ಈ ಮಹಿಳೆ ಕ್ವಾರಂಟೀನ್ ನಿಯಮ ಉಲ್ಲಂಘಿಸಿದ್ದಾರೆಂದು ತುಮಕೂರಿನಲ್ಲಿ ಈ ಮಹಿಳೆಯನ್ನು ಅಧಿಕಾರಿಗಳು ಕೆಳಗೆ ಇಳಿಸಿರುವ ಘಟನೆ ನಡೆದಿದೆ. ಅಷ್ಟೇ ಅಲ್ಲ ಬೆಂಗಳೂರಿಗೆ ವಾಪಸ್ ಹೋಗುವಂತೆ ಒತ್ತಾಯಿಸಿದ್ದಾರೆ.
ಈ ವೇಳೆ ಆ ಟ್ರೈನ್ನಲ್ಲಿದ್ದ ಅನೇಕ ಮಂದಿ ಆತಂಕಕ್ಕೀಡಾದರು. ನಂತರ ಈ ಮಹಿಳೆ ತಪ್ಪು ಮಾಡಿಲ್ಲ ಎಂದು ತಿಳಿದು ಬೇರೊಂದು ಟ್ರೈನ್ನಲ್ಲಿ ಗದಗ್ ಗೆ ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ ಅಧಿಕಾರಿಗಳು. ಅಧಿಕಾರಿಗಳ ಎಡವಟ್ಟಿನಿಂದ ಮಹಿಳೆಗೆ ಮುಜುಗರ ತಂದಿದ್ದಂತೂ ಸತ್ಯ.