ಕೆಲ ಶಾಸಕರುಗಳು ಪ್ರತ್ಯೇಕ ಸಭೆ ನಡೆಸಿದ ವಿಚಾರ ಬಹಿರಂಗವಾಗುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಯಾಗಿತ್ತು. ಅದರಲ್ಲೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ನೇರವಾಗಿಯೇ ವಾಗ್ದಾಳಿ ನಡೆಸಿದ ಕಾರಣ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿತ್ತು.
ಏಕಾಏಕಿ ನಡೆದ ಈ ರಾಜಕೀಯ ಬೆಳವಣಿಗೆಯಿಂದಾಗಿ ಒಂದು ಹಂತದಲ್ಲಿ ಕೊರೊನಾ ಸಂಕಷ್ಟವೇ ಮರೆಯಾಗುವಂತಾಗಿತ್ತು. ಈ ಶಾಸಕರುಗಳ ಅತೃಪ್ತಿ ತಣಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು.
ಆದರೆ ಇದೆಲ್ಲವೂ ಈಗ ಹುಸಿಯಾಗಿದೆ. ಅತೃಪ್ತ ಶಾಸಕರುಗಳನ್ನು ಕರೆದು ಮಾತನಾಡುವುದಿರಲಿ ಕೊನೆಪಕ್ಷ ದೂರವಾಣಿ ಕರೆಯನ್ನೂ ಮುಖ್ಯಮಂತ್ರಿ ಯಡಿಯೂರಪ್ಪ ಮಾಡಿಲ್ಲವೆಂದು ಹೇಳಲಾಗಿದೆ. ಹೀಗಾಗಿ ದಿಢೀರ್ ಭುಗಿಲೆದ್ದ ಭಿನ್ನಮತ ಅಷ್ಟೇ ವೇಗದಲ್ಲಿ ತಣ್ಣಗಾಗಿದೆ. ಆದರೆ ಒಳಗೊಳಗೆ ಕುದಿಯುತ್ತಿರುವ ಈ ಶಾಸಕರುಗಳು ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ಕುತೂಹಲ ಮನೆಮಾಡಿದೆ.