ಕೊರೋನಾ ವೈರಸ್ ನಿಂದ ಲಾಕ್ ಡೌನ್ ಹಿನ್ನಲೆಯಲ್ಲಿ ತಮ್ಮ ತಮ್ಮ ಊರುಗಳಿಗೆ ತೆರಳಲು ವಲಸೆ ಕಾರ್ಮಿಕರು ಮುಂದಾಗಿದ್ದಾರೆ. ಈಗಾಗಲೇ ಅಂತರ್ ಜಿಲ್ಲೆಗಳಿಗೆ ಹೋಗಲು ಸರ್ಕಾರ ಬಸ್ ವ್ಯವಸ್ಥೆ ಮಾಡಿದೆ. ಹಾಗಾಗಿ ಒಂದು ಲಕ್ಷಕ್ಕೂ ಅಧಿಕ ಮಂದಿ ತಮ್ಮ ತಮ್ಮ ಜಿಲ್ಲೆಗಳಿಗೆ ಹೋಗಿದ್ದಾರೆ.
ಇತ್ತ ಅಂತರ್ ರಾಜ್ಯದಿಂದ ಬಂದಿದ್ದ ವಲಸೆ ಕಾರ್ಮಿಕರನ್ನು ತಮ್ಮ ರಾಜ್ಯಗಳಿಗೆ ಹೋಗಲು ಅನುವು ಮಾಡಿಕೊಟ್ಟಿತ್ತು ರಾಜ್ಯ ಸರ್ಕಾರ. ಆದರೆ ಇದೀಗ ಕಾರ್ಮಿಕರ ರವಾನೆಗಾಗಿ ಬೇಡಿಕೆ ಇಟ್ಟಿದ್ದ ರೈಲುಗಳನ್ನು ರದ್ದುಗೊಳಿಸಿದೆ.
ಹೌದು, ವಲಸೆ ಕಾರ್ಮಿಕರನ್ನು ತವರು ರಾಜ್ಯಗಳಿಗೆ ಕಳಿಸಲು ಕರ್ನಾಟಕ ಸರ್ಕಾರ ರೈಲುಗಳಿಗಾಗಿ ಬೇಡಿಕೆ ಇಟ್ಟಿತ್ತು. ಆದರೆ, ಈಗ ರೈಲುಗಳ ಅವಶ್ಯಕತೆ ಇಲ್ಲ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ನೈಋತ್ಯ ರೈಲ್ವೆ ಇಲಾಖೆಗೆ ಪತ್ರ ರವಾನಿಸಿದ್ದಾರೆ.
ನಿನ್ನೆ ಬಿಲ್ಡರ್ ಮತ್ತು ಗುತ್ತಿಗೆದಾರರ ಜೊತೆ ಯಡಿಯೂರಪ್ಪ ಸಭೆ ನಡೆಸಿದ್ದರು. ಸಭೆಯಲ್ಲಿ ಪಾಲ್ಗೊಂಡಿದ್ದ ಬಿಲ್ಡರ್ಗಳು ನಿರ್ಮಾಣ ಚಟುವಟಿಕೆಗಳನ್ನು ಪುನಃ ಆರಂಭಿಸಲು ನಮಗೆ ಕಾರ್ಮಿಕರು ಬೇಕು ಎಂದು ಬೇಡಿಕೆ ಇಟ್ಟಿದ್ದರು. ಈ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯವನ್ನು ಆಧರಿಸಿ ರೈಲುಗಳನ್ನು ರದ್ದುಪಡಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.