ಕೇಂದ್ರ ಸರ್ಕಾರ ಮೂರನೇ ಹಂತದ ಲಾಕ್ ಡೌನ್ ಘೋಷಿಸಿದ್ದು, ಮೇ 17 ರವರೆಗೆ ಇದು ಮುಂದುವರಿಯಲಿದೆ. ಇದರ ಮಧ್ಯೆ ಲಾಕ್ ಡೌನ್ ನಲ್ಲಿ ಹಲವು ವಿನಾಯತಿಗಳನ್ನು ಘೋಷಿಸಿದ್ದು, ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಸಹ ಅವಕಾಶ ಕಲ್ಪಿಸಲಾಗಿದೆ.
ಇದರ ಜೊತೆಗೆ ತುರ್ತು ಕೆಲಸ ನಿಮಿತ್ತ ಅಂತರ್ ಜಿಲ್ಲೆಗೆ ತೆರಳಲು ಮುಂದಾಗುವವರಿಗೆ ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ಆನ್ ಲೈನ್ ನಲ್ಲಿ ಪಾಸ್ ವಿತರಿಸಲು ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾರ್ವಜನಿಕರು ಸಕಾರಣಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ವೈದ್ಯಕೀಯ ಚಿಕಿತ್ಸೆ, ವಲಸೆ ಕಾರ್ಮಿಕರು ಹಾಗೂ ಇತರೆ ತುರ್ತು ಕಾರ್ಯಗಳಿಗಾಗಿ ಅಂತರ್ ಜಿಲ್ಲೆಗೆ ತೆರಳುವ ಅನಿವಾರ್ಯತೆಯಲ್ಲಿ ಇರುವವರು kspclearpass.idp.mygate.com ವೆಬ್ ಸೈಟ್ ನಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಕೆಲವೊಂದು ಷರತ್ತುಗಳೊಂದಿಗೆ ಪಾಸ್ ಪಡೆಯಬಹುದಾಗಿದೆ.