ದೇಶದ ಬ್ಯಾಂಕ್ ಗಳಲ್ಲಿ ಸಾವಿರಾರು ಕೋಟಿ ರೂ. ಸಾಲ ಮಾಡಿ ಲಂಡನ್ ಗೆ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯರನ್ನು ಸದ್ಯದಲ್ಲೇ ಭಾರತಕ್ಕೆ ಗಡಿಪಾರು ಮಾಡಲಾಗುವುದು.
ಲಂಡನ್ನಲ್ಲಿ ಎಲ್ಲಾ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಮುಂಬೈಗೆ ವಿಜಯ್ ಮಲ್ಯ ಬಂದಿಳಿಯುತ್ತಿದ್ದಂತೆ ಆರೋಗ್ಯ ತಪಾಸಣೆ ನಡೆಸಲಾಗುವುದು.
ಮುಂಬೈ ವಿಮಾನ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆ ಮಾಡಲಿದ್ದು, ಹಗಲು ವೇಳೆಯಲ್ಲಿ ವಿಜಯಮಲ್ಯ ಮುಂಬೈನಲ್ಲಿ ಲ್ಯಾಂಡ್ ಆದರೆ ನೇರವಾಗಿ ಕರೆದುಕೊಂಡು ಹೋಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಅವರು ರಾತ್ರಿ ಮುಂಬೈನಲ್ಲಿ ಲ್ಯಾಂಡಿಂಗ್ ಆದರೆ ಸಿಬಿಐ ಕಚೇರಿಯಲ್ಲಿ ರಾತ್ರಿ ಕಳೆಯಬೇಕಿದೆ.
ಸಿಬಿಐ ಮೊದಲು ವಿಜಯಮಲ್ಯ ಅವರನ್ನು ತನ್ನ ವಶಕ್ಕೆ ಪಡೆಯಲಿದ್ದು ನಂತರ ಇಡಿ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆಯಲಿದ್ದಾರೆ. ಲಂಡನ್ ಹೈಕೋರ್ಟ್ ವಿಜಯಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಲು ಆದೇಶ ನೀಡಿದೆ. ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಲು ಅನುಮತಿ ನೀಡಿಲ್ಲ. ಹೀಗಾಗಿ ಯಾವುದೇ ಕ್ಷಣದಲ್ಲಿ ಮಲ್ಯ ಗಡಿಪಾರು ಆಗಬಹುದು ಎಂದು ಹೇಳಲಾಗಿದೆ.