ವಿಶ್ವದಲ್ಲಿ ಕರೋನಾ ವೈರಸ್ ಆರ್ಭಟಿಸುತ್ತಿರುವ ಕಾರಣ ಎಲ್ಲೆಡೆ ಆತಂಕ ಮನೆ ಮಾಡಿದೆ. ಈ ಮಾರಣಾಂತಿಕ ಸೋಂಕಿಗೆ ಈಗಾಗಲೇ 2 ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಸೋಂಕು ವ್ಯಾಪಿಸುವ ಭಯದಿಂದ ಬಹುತೇಕರು ತಮ್ಮ ತಾಯ್ನಾಡಿಗೆ ಮರಳಲು ಬಯಸುತ್ತಿದ್ದಾರೆ.
ಹೀಗಾಗಿ ಭಾರತ ಸರ್ಕಾರ ವಿಶ್ವದ ವಿವಿಧೆಡೆ ನೆಲೆಸಿರುವ ಭಾರತೀಯರನ್ನು ವಾಪಸ್ ಕರೆತರಲು ವಿಮಾನ ಸಂಚಾರ ಆರಂಭಿಸಿದೆ. ಅದರಲ್ಲೂ ಕೊಲ್ಲಿ ರಾಷ್ಟ್ರದಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಭಾರತಕ್ಕೆ ಮರಳುವ ತವಕದಲ್ಲಿದ್ದಾರೆ.
ಇದರ ಮಧ್ಯೆ ಸಾವಿರಾರು ಭಾರತೀಯರು ವೀಸಾ ಅವಧಿ ಮುಗಿದಿದ್ದರೂ ಸಹ ಅನಧಿಕೃತವಾಗಿ ಕೊಲ್ಲಿ ರಾಷ್ಟ್ರದಲ್ಲಿ ತಮ್ಮ ವಾಸ್ತವ್ಯ ಮುಂದುವರಿಸಿದ್ದರೆನ್ನಲಾಗಿದ್ದು, ಅಂಥವರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತ ಭಾರತಕ್ಕೆ ವಾಪಸ್ಸಾಗಲು ಅಥವಾ ಕೊಲ್ಲಿ ರಾಷ್ಟ್ರದಲ್ಲಿ ವಾಸ ಮುಂದುವರೆಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇವರುಗಳಿದ್ದು, ತಮ್ಮನ್ನು ಕರೆದುಕೊಂಡು ಹೋಗುವಂತೆ ಭಾರತೀಯ ದೂತಾವಾಸ ಕಚೇರಿಗೆ ಮನವಿ ಸಲ್ಲಿಸುತ್ತಿದ್ದಾರೆ.