ತೆಲಂಗಾಣದ ವಾರಂಗಲ್ ಸಮೀಪ ಬಾವಿಯಲ್ಲಿ ಪತ್ತೆಯಾಗಿದ್ದ 9 ಮೃತದೇಹಗಳ ಸಾವಿನ ರಹಸ್ಯ ಬಯಲಾಗಿದೆ. ಮಹಿಳೆಯೊಂದಿಗೆ ಅಕ್ರಮ ಸಂಬಂಧ ಮತ್ತು ಹತ್ಯೆ ಪ್ರಕರಣ ಮುಚ್ಚಿಡುವ ಕಾರಣದಿಂದ ಬಿಹಾರದ ವ್ಯಕ್ತಿ ಈ ಕೃತ್ಯವೆಸಗಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ತನಿಖೆಯಲ್ಲಿ ಬೆಚ್ಚಿ ಬೀಳಿಸುವ ರಹಸ್ಯ ಬಯಲಾಗಿದೆ. ಬಿಹಾರ ಮೂಲದ ಸಂಜಯ್ ಕುಮಾರ್ ಯಾದವ್ ಬಂಧಿತ ಆರೋಪಿಯಾಗಿದ್ದಾನೆ. ವಾರಂಗಲ್ ಸಮೀಪದ ಗೋರೆಕುಂಟ ಕೃಷಿ ಜಮೀನಿನಲ್ಲಿ ಇದ್ದ ಬಾವಿಯಲ್ಲಿ ಬರೋಬ್ಬರಿ 9 ಮೃತದೇಹಗಳು ಪತ್ತೆಯಾಗಿದ್ದವು. ವಾರಂಗಲ್ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಸಂದರ್ಭದಲ್ಲಿ ಕೊಲೆ ರಹಸ್ಯ ಬೆಳಕಿಗೆ ಬಂದಿದೆ.
ಪಶ್ಚಿಮ ಬಂಗಾಳ ಮೂಲದ ಮಕ್ಸೂದ್ 20 ವರ್ಷಗಳಿಂದ ಕುಟುಂಬ ಸಮೇತ ವಾರಂಗಲ್ ನಲ್ಲಿ ನೆಲೆಸಿದ್ದು 5 ವರ್ಷಗಳ ಹಿಂದೆ ಬಂದಿದ್ದ ರಫೀಕಾ ಮೂವರು ಮಕ್ಕಳೊಂದಿಗೆ ಮಕ್ಸೂದ್ ಮನೆಯಲ್ಲೇ ಇದ್ದಳು. ಗೋರೆಕುಂಟ ಗ್ರಾಮದ ಸೆಣಬು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಸಂಜಯ್ ಕುಮಾರ್ ಜೊತೆಗೆ ರಫೀಕಾ ಸಂಬಂಧ ಬೆಳೆಸಿದ್ದು ತನ್ನ ಮೂವರು ಮಕ್ಕಳೊಂದಿಗೆ ಆತನ ಮನೆಗೆ ಸ್ಥಳಾಂತರಗೊಂಡಿದ್ದಳು. ಆಕೆಯನ್ನು ಮದುವೆಯಾಗುವುದಾಗಿ ಸಂಜಯ್ ಕುಮಾರ್ ಯಾದವ್ ಭರವಸೆ ನೀಡಿದ್ದು ಇಬ್ಬರ ನಡುವೆ ಸಂಬಂಧ ಬೆಳೆದಿದೆ. ಈ ನಡುವೆ ರಫೀಕಾಳ ಮಗಳೊಂದಿಗೆ ಸಂಜಯ್ ಅಸಭ್ಯವಾಗಿ ವರ್ತಿಸಿ ಆಕೆಯನ್ನು ಮದುವೆಯಾಗುವುದಾಗಿ ಬಲವಂತ ಮಾಡಿದ್ದ.
ಮಾರ್ಚ್ 7 ರಂದು ರಫೀಕಾ ಪಶ್ಚಿಮ ಬಂಗಾಳದಲ್ಲಿರುವ ಕುಟುಂಬದವರನ್ನು ಭೇಟಿ ಮಾಡಲು ಸಂಜಯ್ ನನ್ನು ಕರೆದುಕೊಂಡು ಹೋಗಿದ್ದಾರೆ. ಆಕೆಯ ಸಂಬಂಧಿಕರೊಂದಿಗೆ ಮಾತನಾಡಿ ರಫಿಕಾಳನ್ನು ಮದುವೆಯಾಗುವ ಭರವಸೆ ನೀಡಲು ಸಂಜಯ್ ಕೂಡ ಜೊತೆಗೇ ಹೋಗಿದ್ದಾನೆ. ಆದರೆ, ಮಾರ್ಗಮಧ್ಯದಲ್ಲೇ ಪಾನೀಯದಲ್ಲಿ ಮತ್ತು ಬರುವ ಮಾತ್ರೆ ನೀಡಿ ರಫಿಕಾಳನ್ನು ಹತ್ಯೆ ಮಾಡಿ ರೈಲಿನಿಂದ ಹೊರಗೆ ನೂಕಿದ್ದಾನೆ. ತಡೆಪಲ್ಲಿಗುಡೆಂನಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾದ ಬಗ್ಗೆ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ರಾಜಮಂಡ್ರಿಯಲ್ಲಿ ರೈಲು ಇಳಿದ ಸಂಜಯ್ ವಾರಂಗಲ್ ಗೆ ವಾಪಸಾಗಿದ್ದು, ರಫೀಕಾ ಪಶ್ಚಿಮಬಂಗಾಳದಲ್ಲಿ ಉಳಿದುಕೊಂಡಿದ್ದು ಕೆಲವು ದಿನಗಳ ನಂತರ ಇಲ್ಲಿಗೆ ಬರುತ್ತಾರೆ ಎಂದು ಆಕೆಯ ಮಕ್ಕಳಿಗೆ ಹೇಳಿದ್ದಾನೆ. ಮಕ್ಸೂದ್ ಮತ್ತು ಆತನ ಪತ್ನಿಗೆ ಈತನ ಮೇಲೆ ಸಂಶಯವುಂಟಾಗಿ ರಫಿಕಾ ಬಗ್ಗೆ ಪದೇ ಪದೇ ವಿಚಾರಿಸಿದ್ದಾರೆ.
ಈ ನಡುವೆ ಲಾಕ್ಡೌನ್ ಜಾರಿಯಾಗಿದ್ದರಿಂದ ಸಂಜಯ್ ಕುಮಾರ್ ಮತ್ತು ಮತ್ತು ಮಕ್ಸೂದ್ ಕುಟುಂಬದ ಸಂಪರ್ಕ ಕಡಿದುಹೋಗಿದೆ. ಮೇ 15 ರಂದು ಆತ ಸಂಪರ್ಕಕ್ಕೆ ಸಿಕ್ಕ ನಂತರ ಮಕ್ಸೂದ್ ಕುಟುಂಬದವರು ರಫೀಕಾ ಬಗ್ಗೆ ಕೇಳಿ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಸಿದ್ದಾರೆ.
ಆಗ ಮಕ್ಸೂದ್ ಕುಟುಂಬದವರನ್ನು ಕೊಲೆ ಮಾಡಲು ನಿರ್ಧರಿಸಿದ ಸಂಜಯ್ ಕುಮಾರ್ ಪ್ಲಾನ್ ಮಾಡಿದ್ದಾನೆ. ಮಕ್ಸೂದ್ ಕುಟುಂಬದವರು ಸೇರಿದಂತೆ ಅಲ್ಲೇ ಕೆಲಸ ಮಾಡುತ್ತಿದ್ದ ಬಿಹಾರದ ಇಬ್ಬರು ಕೆಲಸಗಾರರನ್ನು ಕೊಲೆ ಮಾಡಿದ್ದಾನೆ. 50 ನಿದ್ದೆ ಮಾತ್ರೆಗಳನ್ನು ದಾಲ್ ಗೆ ಬೆರೆಸಿದ್ದು ಊಟದ ನಂತರ ಎಲ್ಲರೂ ತಡರಾತ್ರಿ ನಿದ್ದೆಯಲ್ಲಿದ್ದ ವೇಳೆಯಲ್ಲಿ ಚೀಲಕ್ಕೆ ತುಂಬಿ ಕೃಷಿ ಜಮೀನಿನಲ್ಲಿದ್ದ ಬಾವಿಗೆ ಎಸೆದಿದ್ದಾನೆ. ಸಿಸಿಟಿವಿ ದೃಶ್ಯ ಮತ್ತು ಫೋನ್ ಕರೆ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಇದರಿಂದ ಬಾವಿಯಲ್ಲಿ ಸಿಕ್ಕ 9 ಮಂದಿ ಮೃತದೇಹದ ಸಾವಿನ ರಹಸ್ಯ ಬಯಲಾಗಿದೆ. ರಫಿಕಾಳ ಮಕ್ಕಳನ್ನು ಪಶ್ಚಿಮ ಬಂಗಾಳದಲ್ಲಿರುವ ಸಂಬಂಧಿಕರ ಬಳಿಗೆ ಕಳಿಸಲು ಪೊಲೀಸರು ಮುಂದಾಗಿದ್ದಾರೆ.