ವಿಶಾಖಪಟ್ಟಣಂ: ಆಂಧ್ರಪ್ರದೇಶದ ವೈಜಾಗ್ ನಲ್ಲಿ ರಾಸಾಯನಿಕ ಸ್ಥಾವರದಿಂದ ಅನಿಲ ಸೋರಿಕೆಯಾಗಿ ಎಂಟು ಮಂದಿ ಸಾವನ್ನಪ್ಪಿದ್ದಾರೆ.
ಮೃತರಲ್ಲಿ ಇಬ್ಬರು ಹಿರಿಯ ನಾಗರಿಕರು ಮತ್ತು 8 ವರ್ಷದ ಬಾಲಕಿ ಕೂಡ ಇದ್ದಾರೆ. ಸುಮಾರು 5000ಕ್ಕೂ ಅಧಿಕ ಮಂದಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಗುರುವಾರ ಬೆಳಗಿನ ಜಾವ ವೈಜಾಗ್ ನಲ್ಲಿ ರಾಸಾಯನಿಕ ಅನಿಲ ಸ್ಥಾವರದಿಂದ ಅನಿಲ ಸೋರಿಕೆಯಾಗಿದೆ. ಗೋಪಾಲಪಟ್ಟಣಕ್ಕೆ ಸಮೀಪವಿರುವ ನಾಯ್ಡು ತೋಟ ಪ್ರದೇಶದ ಆರ್.ಆರ್. ವೆಂಕಟಪುರಂ ಆರ್.ಜಿ. ಪಾಲಿಮರ್ ಉದ್ಯಮದಲ್ಲಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಅನಿಲ ಸೋರಿಕೆ ಉಂಟಾಗಿದೆ. ಸುತ್ತಮುತ್ತಲಿನ ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಆತಂಕಕ್ಕೆ ಕಾರಣವಾಗಿದೆ.
ಅನೇಕ ಜನ ರಸ್ತೆಗಳಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದು, ಉಸಿರಾಟದ ತೊಂದರೆ ಎದುರಿಸುವಂತಾಗಿದೆ. ವಿಷಯ ಬೆಳಕಿಗೆ ಬಂದ ಕೂಡಲೇ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ರಾಸಾಯನಿಕ ಘಟಕದಲ್ಲಿ ಅನಿಲ ಸೋರಿಕೆಯಾಗಿ ಸಾವಿರಾರು ಜನ ಅನಾರೋಗ್ಯಕ್ಕೆ ಒಳಗಾಗಿ ಉಸಿರಾಟ ತೊಂದರೆ ಎದುರಿಸುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವೈಜಾಗ್ ಜಿಲ್ಲಾಧಿಕಾರಿ ವಿನಯ್ ಚಂದ್ ಸ್ಥಳದಲ್ಲಿ ಮೇಲ್ವಿಚಾರಣೆ ನಡೆಸಿದ್ದಾರೆ. ಎನ್.ಡಿ.ಆರ್.ಎಫ್. ಮತ್ತು ಎಸ್.ಡಿ.ಆರ್.ಎಫ್. ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಕೂಡ ಸ್ಥಳಕ್ಕೆ ತೆರಳಿದ್ದಾರೆ.