ಆಹಾರ ಹುಡುಕಿಕೊಂಡು ಬಂದ ಸಿಂಹವೊಂದು ಶಾಲಾ ಕೊಠಡಿಯಲ್ಲಿ ಸಿಕ್ಕಿಬಿದ್ದ ಪ್ರಸಂಗ ಗುಜರಾತಿನ ಸೋಮನಾಥ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
ಬುಧವಾರ ನಸುಕಿನಲ್ಲಿ ಸಿಂಹ ಗ್ರಾಮವನ್ನು ಪ್ರವೇಶಿಸಿ ಅಲ್ಲಿನ ಜಾನುವಾರುಗಳನ್ನು ಬೇಟೆಯಾಡಲು ಹೊಂಚು ಹಾಕಿದೆ. ಈ ವೇಳೆ ಜಾನುವಾರು ಮಾಲೀಕ ಎಚ್ಚರಗೊಂಡಾಗ ಸಿಂಹವು ಅಲ್ಲಿಂದ ತಪ್ಪಿಸಿಕೊಂಡು ನೆರೆಯ ಶಾಲಾ ಆವರಣ ಪ್ರವೇಶಿಸಿತು.
ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ಆರಂಭಿಸಿದರು. ಆರಂಭದಲ್ಲಿ ಸಿಂಹವು ಬೋನ್ ಪ್ರವೇಶಿಸದೆ ಸತಾಯಿಸಿದ್ದು, ಬಳಿಕ ಕಾರ್ಯಾಚರಣೆ ಯಶಸ್ವಿಯಾಯಿತು. ನಂತರ ಅದನ್ಮು ಕಾಡಿಗೆ ಬಿಡಲಾಗಿದ್ದು, ಕಾರ್ಯಾಚರಣೆ ವೇಳೆ ಘರ್ಜಿಸಿದ ಸಿಂಹದ ವಿಡಿಯೋವನ್ನು ಅರಣ್ಯಾಧಿಕಾರಿಗಳು ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಜತೆಗೆ ಸಿಂಹವು ಶಾಲೆಯಲ್ಲಿ ಪ್ರವೇಶ ಮಾಡಿಕೊಳ್ಳಲು ಬಂದಿತ್ತು ಎಂದು ಅಧಿಕಾರಿ ತಮಾಷೆ ಮಾಡಿದ್ದಾರೆ.