ತಿರುಪತಿ: ವಿಶ್ವದ ಶ್ರೀಮಂತ ದೇಗುಲ ತಿರುಪತಿ-ತಿರುಮಲದ ಶ್ರೀ ವೆಂಕಟೇಶ್ವರ ದೇವಾಲಯದ ಸಿಬ್ಬಂದಿಗೆ ಪೂರ್ಣ ವೇತನ ನೀಡಲು ಆಡಳಿತ ಮಂಡಳಿ ಮುಂದಾಗಿದೆ.
ದೇವಾಲಯದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಟಿಟಿಡಿ ಆಡಳಿತ ಮಂಡಳಿ ದೇಗುಲದ ಸಿಬ್ಬಂದಿಗೆ ವೇತನ ಕಡಿತ ಮಾಡದೇ ಎಲ್ಲಾ 23 ಸಾವಿರ ಸಿಬ್ಬಂದಿಗೆ ಮುಂದಿನ ಎರಡು ಮೂರು ತಿಂಗಳವರೆಗೆ ಪೂರ್ಣ ವೇತನ ನೀಡುವ ಭರವಸೆ ನೀಡಿದೆ.
ಕೊರೋನಾ ಸೋಂಕು ತಡೆಗೆ ಲಾಕ್ಡೌನ್ ಜಾರಿ ಮಾಡಿರುವುದರಿಂದ ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿಮ್ಮಪ್ಪನ ದರ್ಶನ ಬಂದ್ ಆಗಿದೆ. ದೇಗುಲದಲ್ಲಿ 8 ಸಾವಿರ ಕಾಯಂ ಉದ್ಯೋಗಿಗಳು, 15 ಸಾವಿರ ಹೊರಗುತ್ತಿಗೆ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಲಾಕ್ ಡೌನ್ ಜಾರಿಯಾಗಿರುವುದರಿಂದ ತಿಂಗಳಿಗೆ 200 ಕೋಟಿ ರೂಪಾಯಿಯಷ್ಟು ಆದಾಯ ನಷ್ಟವಾಗುತ್ತಿದೆ. ಎರಡು ತಿಂಗಳಲ್ಲಿ ಸುಮಾರು 400 ಕೋಟಿ ರೂ. ಆದಾಯ ನಷ್ಟವಾಗಿದೆ.
ವಿವಿಧ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ 12,000 ಕೋಟಿ ರೂಪಾಯಿ ನಿಶ್ಚಿತ ಠೇವಣಿ ಇಡಲಾಗಿದೆ. ದೇವಾಲಯದ ನಿಶ್ಚಿತ ಠೇವಣಿಗಳಿಂದ ಬಡ್ಡಿ ಆದಾಯವಾಗಿ ವಾರ್ಷಿಕ 700 ಕೋಟಿ ರೂಪಾಯಿ ಬರುತ್ತದೆ. ಲಾಕ್ ಡೌನ್ ನಿಂದಾಗಿ ಆದಾಯ ನಷ್ಟವಾದರೂ ಟಿಟಿಡಿ ಸಿಬ್ಬಂದಿಗೆ ಮುಂದಿನ ಎರಡು ಮೂರು ತಿಂಗಳು ಪೂರ್ಣ ವೇತನ ನೀಡಲಾಗುವುದು ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ಹೇಳಿದ್ದಾರೆ.