ಕೊರೊನಾ ವೈರಸ್ ಕಾರಣಕ್ಕಾಗಿ ಜಾರಿಗೆ ಬಂದಿರುವ ಲಾಕ್ ಡೌನ್, ಕೂಲಿ ಕಾರ್ಮಿಕರ ಬದುಕನ್ನು ಕಂಗೆಡಿಸಿದೆ. ಹೊಟ್ಟೆಪಾಡಿಗಾಗಿ ಸಾವಿರಾರು ಕಿಮೀ ದೂರದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಬಂದಿದ್ದ ಇವರುಗಳು ಈಗ ಕೆಲಸವಿಲ್ಲದೆ ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ.
ಹೀಗಾಗಿ ವಿಧಿಯಿಲ್ಲದೆ ಅನಿವಾರ್ಯವಾಗಿ ತಮ್ಮ ತಮ್ಮ ಊರುಗಳಿಗೆ ಮರಳುತ್ತಿದ್ದಾರೆ. ಆದರೆ ಬಸ್ ಹಾಗೂ ರೈಲು ಸಂಚಾರವಿಲ್ಲದ ಕಾರಣ ಇದಕ್ಕಾಗಿ ಕಾಲ್ನಡಿಗೆಯನ್ನೇ ಆಶ್ರಯಿಸಿದ್ದಾರೆ. ಹೀಗೆ ಸಾಗುವಾಗ ಈಗಾಗಲೇ ನೂರಾರು ಮಂದಿ ವಿವಿಧ ದುರ್ಘಟನೆಗಳಿಂದ ಸಾವನ್ನಪ್ಪಿದ್ದಾರೆ.
ವಲಸೆ ಕಾರ್ಮಿಕರ ನೋವಿನ ಕಥೆಯನ್ನು ಮಾಧ್ಯಮಗಳು ತೆರೆದಿಡುತ್ತಿದ್ದು, ಹೀಗೆ ವರದಿ ಮಾಡಲು ತೆರಳಿದ್ದ ಬಿಬಿಸಿಯ ವರದಿಗಾರ ಮಾಡಿರುವ ಕಾರ್ಯವೊಂದು ನಟಿ ಪೂಜಾ ಭಟ್ ಕಣ್ಣೀರಿಡುವಂತೆ ಮಾಡಿದೆ.
ವರದಿಗಾರ ಸಲ್ಮಾನ್ ರವಿ ನವದೆಹಲಿಯಿಂದ 250 ಕಿಮೀ ದೂರದ ಮಧ್ಯಪ್ರದೇಶದಲ್ಲಿರುವ ತನ್ನೂರಿಗೆ ತನ್ನ ಪುಟ್ಟ ಮಗನನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿದ್ದ ವಲಸೆ ಕಾರ್ಮಿಕನನ್ನು ಮಾತನಾಡಿಸಲು ಮುಂದಾಗಿದ್ದಾರೆ.
ಈ ವೇಳೆ ಆತ ಬರಿಗಾಲಿನಲ್ಲಿರುವುದನ್ನು ಕಂಡು ಪ್ರಶ್ನಿಸಿದ ಸಲ್ಮಾನ್ ರವಿಗೆ ವಲಸೆ ಕಾರ್ಮಿಕ, ಚಪ್ಪಲಿ ಹರಿದು ಹೋಯಿತು ಎಂದು ಹೇಳಿದ್ದಾನೆ. ಇದನ್ನು ಕೇಳಿ ಒಂದು ಕ್ಷಣ ಅವಾಕ್ಕಾದ ವರದಿಗಾರ ತಾನು ಧರಿಸಿದ್ದ ದುಬಾರಿ ಬೆಲೆಯ ಶೂ ನೀಡಿದ್ದಾರೆ. ವಲಸೆ ಕಾರ್ಮಿಕ ಮೊದಲು ಅದನ್ನು ಸ್ವೀಕರಿಸಲು ನಿರಾಕರಿಸಿದರೂ ನಂತರ ಸಲ್ಮಾನ್ ರವಿ ಬಲವಂತವಾಗಿ ಆತನಿಗೆ ನೀಡಿದ್ದಾರೆ. ವರದಿಗಾರನ ಈ ಮಾನವೀಯ ಕಾರ್ಯ ಎಲ್ಲರ ಮನ ಕಲಕಿದೆ.