ಇಂಪಾಲ್: ಕರೋನಾ ವೈರಸ್ ಇಡೀ ದೇಶವನ್ನು ತನ್ನ ಮುಷ್ಟಿಯಲ್ಲಿ ಬಂಧಿಸಿದೆ. ಮಾರ್ಚ್ 23 ರಿಂದ ಇಡೀ ದೇಶ ಸ್ತಬ್ಧವಾಗಿದ್ದು ಅವಶ್ಯಕ ವಸ್ತುಗಳಿಗಾಗಿ ಕೆಲವರು ಪರದಾಡುವ ಪರಿಸ್ಥಿತಿ ಎದುರಾಗಿದೆ. ದುಡಿದು ತಿನ್ನುತ್ತಿದ್ದ ಕೈಗಳಿಗೆ, ಕೈ ಚಾಚಿ ಬೇಡುವ ಪರಿಸ್ಥಿತಿ ಬಂದಿದೆ. ಹಲವು ಮಧ್ಯಮ ವರ್ಗದವರು ಅಗತ್ಯ ವಸ್ತುಗಳನ್ನು ಪಡೆಯಲು ಮುಜುಗರಪಟ್ಟುಕೊಳ್ಳುತ್ತಿದ್ದಾರೆ.
ಇಂತ ಸಂದರ್ಭದಲ್ಲಿ ಮಣಿಪುರ ಸರ್ಕಾರ ಅವಶ್ಯಕ ವಸ್ತುಗಳನ್ನು ವಿಭಿನ್ನವಾಗಿ ಹಂಚಿ ದೇಶದ ಗಮನ ಸೆಳೆದಿದೆ. ಪಡೆಯುವವರಿಗೆ ಮುಜುಗರವಾಗದಂತೆ ಅಗತ್ಯ ವಸ್ತುಗಳನ್ನು ಹೇಗೆ ಹಂಚಬಹುದು ಎಂಬುದನ್ನು ತೋರಿಸಿಕೊಟ್ಟಿದೆ.
ಎಲ್ಲ ಅವಶ್ಯಕ ವಸ್ತುಗಳನ್ನು ಒಂದೊಂದು ರಾಶಿಗಳನ್ನು ಮಾಡಿ, ಅವಶ್ಯಕತೆ ಇರುವವರು ತಮಗೆ ಯಾವುದು ಬೇಕೋ ಅದನ್ನು ಅವರೇ ಆರಿಸಿಕೊಂಡು ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಅವರ ಅವಶ್ಯಕತೆಯೂ ಪೂರ್ಣಗೊಳ್ಳುತ್ತದೆ ಮತ್ತು ತೆಗೆದುಕೊಳ್ಳುವ ಜನರಿಗೆ ಯಾವುದೇ ಮುಜುಗರವೂ ಆಗುವುದಿಲ್ಲ.
ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಇಂಥ ಅದ್ಭುತ ರೀತಿಯಲ್ಲಿ ಪರಿಹಾರದ ವಸ್ತುಗಳನ್ನು ಹಂಚುತ್ತಿದ್ದಾರೆ. ದೇಶದ ಪುಟ್ಟ ರಾಜ್ಯದಿಂದ ಕಲಿಯುವುದು ಸಾಕಷ್ಟಿದೆ. ಎಲ್ಲರೂ ಇದೆ ರೀತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಬರೆದುಕೊಂಡಿದ್ದಾರೆ.