
ಕೊಲ್ಕತ್ತಾ: ಶಿಕ್ಷಣ ಸಂಸ್ಥೆಯ ಕಟ್ಟಡದೊಳಗೆ ಬರುವವರನ್ನು ರೋಗ ಮುಕ್ತವಾಗಿ ಮಾಡಲು ಪಶ್ಚಿಮ ಬಂಗಾಳದ ಪೂರ್ವ ಬುರ್ದ್ಬಾನ್ ಜಿಲ್ಲೆಯ ವಿದ್ಯಾರ್ಥಿಗಳು ಆಯುರ್ವೇದ ಸ್ಯಾನಿಟೈಸೇಶನ್ ಸುರಂಗವನ್ನು ಸಿದ್ಧ ಮಾಡಿದ್ದಾರೆ.
ಮೇರಿ ಕ್ರಿಸ್ಟೆಲ್ ಮಾದರಿ ಶಾಲೆಯಲ್ಲಿ ಈ ವ್ಯವಸ್ಥೆ ಮಾಡಿದ್ದು, 12 ವ್ಯಕ್ತಿಗಳು ಒಮ್ಮೆಲೇ ಸುರಂಗ ಪ್ರವೇಶಿಸಿ ಸೋಂಕು ಕಳೆದುಕೊಳ್ಳಬಹುದು ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಮಾಹಿತಿ ನೀಡಿದ್ದಾರೆ.
ಶಾಲೆಯ ತಾಂತ್ರಿಕ ಕ್ಲಬ್ ವರ್ಕ್ ಶಾಪ್ ನಲ್ಲಿ ಇದನ್ನು ಶಿಕ್ಷಕರ ಸಹಕಾರದೊಂದಿಗೆ ವಿದ್ಯಾರ್ಥಿಗಳು ತಯಾರಿಸಿದ್ದಾರೆ. ಸ್ಯಾನಿಟೈಸರ್ ಕರ್ಪೂರದ ಎಣ್ಣೆ, ಮೆಂಥಾಲ್ ಮತ್ತು ಥೈಮ್ ಎಣ್ಣೆಯನ್ನು ಒಳಗೊಂಡಿದೆ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
ಸಾಮಾನ್ಯವಾಗಿ ಸೋಡಿಯಂ ಹೈಪೊಕ್ಲೋರೈಡ್ ನ್ನು ಸೊಂಕುತಡೆ ಸುರಂಗದಲ್ಲಿ ಬಳಸಲಾಗುತ್ತದೆ. ಆದರೆ, ಅದರಿಂದ ಮಾನವನ ದೇಹಕ್ಕೆ ಹಾನಿ ಉಂಟಾಗುವುದರಿಂದ ಈ ಆಯುರ್ವೇದ ಸ್ಯಾನಿಟೈಸರ್ ಬಳಸಲಾಗಿದೆ. ಸುರಂಗದ ಒಳಗೆ ಹೋಗುತ್ತಿದ್ದಂತೆ ತನ್ನಿಂದ ತಾನೇ ಸ್ಯಾನಿಟೈಸರ್ ಸಿಂಪಡಣೆಯಾಗುತ್ತದೆ ಎಂದು ತಿಳಿಸಿದ್ದಾರೆ. ಆಯುರ್ವೇದ ಸ್ಯಾನಿಟೈಸರ್ ಸುರಂಗವನ್ನು ಮೊದಲು ಕೊಲ್ಕತ್ತಾದ ಬಿರ್ಲಾ ಕೈಗಾರಿಕೆ ಮತ್ತು ತಾಂತ್ರಿಕ ಮ್ಯೂಸಿಯಂನಲ್ಲಿ ಇರಿಸಲಾಗಿತ್ತು.