ನವದೆಹಲಿ: ಕೊರೋನಾ ಸೋಂಕಿನಿಂದ ಉಂಟಾಗಿರುವ ಬಿಕ್ಕಟ್ಟು ಬಗೆಹರಿದ ಬಳಿಕ ಶಾಲೆಗಳು ಪ್ರಾರಂಭಗೊಳ್ಳಲಿವೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಖಾತೆ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಹೇಳಿದ್ದಾರೆ.
ಶಿಕ್ಷಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಸಚಿವರು, ವಿದ್ಯಾರ್ಥಿಗಳ ಆರೋಗ್ಯವೇ ಮುಖ್ಯವಾಗಿದ್ದು ಕೊರೋನಾ ಸಂಕಷ್ಟ ಬಗೆಹರಿದ ಬಳಿಕವೇ ಶಾಲೆಗಳನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಶಾಲೆ ಆರಂಭವಾದ ನಂತರದಲ್ಲಿ ಮಕ್ಕಳು ಕುಳಿತುಕೊಳ್ಳುವ ಆಸನ ವ್ಯವಸ್ಥೆ, ಅಂತರ, ಸಮಯ, ತರಗತಿಗಳು ಸೇರಿದಂತೆ ಹಲವು ಬದಲಾವಣೆಗಳು ಆಗಲಿದೆ. ಶಾಲೆಗಳು ಆರಂಭವಾದರೂ ಮೊದಲಿನಂತೆ ಇರುವುದಿಲ್ಲ ಎಂದು ಸುಳಿವು ನೀಡಿದ್ದಾರೆ.
ಸದ್ಯಕ್ಕೆ ಕೊರೋನಾ ಬಗೆಹರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಕೊರೋನಾ ಸಂಕಷ್ಟ ದೂರವಾದ ನಂತರ ಷರತ್ತುಗಳೊಂದಿಗೆ ಶಾಲೆ ಆರಂಭಿಸಲಾಗುವುದು. ಇದಕ್ಕಾಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು. ಶಾಲೆಗಳಲ್ಲಿ ಶೈಕ್ಷಣಿಕ ವಾತಾವರಣಕ್ಕೆ ಪೂರಕವಾದ ಚಟುವಟಿಕೆಗಳನ್ನು ರೂಪಿಸಲಾಗುತ್ತಿದೆ. ಪಠ್ಯಕ್ರಮದಲ್ಲಿ ಹೊಂದಾಣಿಕೆ, ತರಗತಿಗಳು, ವೇಳಾಪಟ್ಟಿ, ಸುರಕ್ಷತೆ, ನೈರ್ಮಲ್ಯ, ಆರೋಗ್ಯ ಮೊದಲಾದವುಗಳಿಗೆ ಆದ್ಯತೆ ನೀಡಬೇಕು. ಕೊರೋನಾ ಸೋಂಕಿನ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು. ಆನ್ಲೈನ್ ಶಿಕ್ಷಣ ಮುಂದುವರೆಸಬೇಕು ಎಂದು ಹೇಳಿದ್ದಾರೆ.