ನವದೆಹಲಿ: ಲಾಕ್ಡೌನ್ ಜಾರಿಯಲ್ಲಿರುವುದರಿಂದ ಎಲ್ಲ ಪಡಿತರ ಚೀಟಿದಾರರಿಗೆ ಮುಂಗಡವಾಗಿ 2 ತಿಂಗಳ ಪಡಿತರ ವಿತರಿಸಲಾಗಿದೆ.
ಇನ್ನು ಪಡಿತರ ಚೀಟಿದಾರರಿಗೆ ಮತ್ತೊಂದು ಸೂಚನೆ ನೀಡಲಾಗಿದೆ. 2020 ರ ಸೆಪ್ಟೆಂಬರ್ 30 ರೊಳಗೆ ಪಡಿತರ ಚೀಟಿದಾರರು ಆಧಾರ್ ಲಿಂಕ್ ಮಾಡಬೇಕಿದೆ. ಆದರೆ ಆಧಾರ್ ಲಿಂಕ್ ಮಾಡಿಲ್ಲವೆಂದು ಪಡಿತರ ವಿತರಣೆ ನಿಲ್ಲಿಸುವಂತಿಲ್ಲ. ಸಾರ್ವಜನಿಕ ವಿತರಣೆ ವ್ಯವಸ್ಥೆಯಡಿ ಆಧಾರ್ ಲಿಂಕ್ ಮಾಡದ ಪಡಿತರ ಚೀಟಿದಾರರಿಗೆ ಕೂಡ ಪಡಿತರ ನೀಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.
ಆಧಾರ್ ಕಾರ್ಡ್ ಜೋಡಣೆ ಮಾಡದ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗುವುದು ಅಥವಾ ಫಲಾನುಭವಿಗಳ ಹೆಸರನ್ನು ತೆಗೆದುಹಾಕಲಾಗುವುದು, ಇನ್ನು ಮುಂದೆ ನ್ಯಾಯಬೆಲೆ ಅಂಗಡಿಗಳಲ್ಲಿ ಆಧಾರ್ ಜೋಡಣೆ ಮಾಡದ ಪಡಿತರ ಚೀಟಿದಾರರಿಗೆ ಪಡಿತರ ನೀಡುವುದಿಲ್ಲ ಎಂಬ ವದಂತಿಗಳು ಹರಡಿದ್ದವು.
ಇದರಿಂದಾಗಿ ಆತಂಕದಲ್ಲಿದ್ದ ಪಡಿತರ ಚೀಟಿದಾರರಿಗೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೆಮ್ಮದಿ ಸುದ್ದಿ ನೀಡಿದೆ. ಆಧಾರ್ ಲಿಂಕ್ ಮಾಡಿಲ್ಲವೆಂಬ ಕಾರಣಕ್ಕೆ ಪಡಿತರ ಸಿಗಲ್ಲವೆಂಬ ಆತಂಕ ಬೇಡ. ಆಧಾರ್ ಜೋಡಣೆ ಮಾಡದಿದ್ದರೂ ಪಡಿತರ ವಿತರಣೆ ಮಾಡಲಾಗುವುದು ಎಂದು ಹೇಳಲಾಗಿದೆ.