ನವದೆಹಲಿ: ಪರಿಸರದ ಬಗ್ಗೆ ಕಾಳಜಿ ವಹಿಸಿದರೆ ಅದು ನಮ್ಮ ಬಗ್ಗೆ ಕಾಳಜಿ ವಹಿಸುತ್ತದೆ. ಹಾಗಾಗಿ ಪರಿಸರದ ಬಗ್ಗೆ ಕಾಳಜಿ ತೋರಬೇಕು. ಭೂಮಿ ಇದ್ದರೆ ಮಾತ್ರ ನಾವು ಬದುಕಬಹುದು ಎಂಬುದನ್ನು ಅರ್ಥಮಾಡಿಕೊಳ್ಳಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಆಕಾಶವಾಣಿ ‘ಮನ್ ಕಿ ಬಾತ್’ನಲ್ಲಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದ ಮೋದಿ, ಕೊರೋನಾದಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ಜನ ನಿಲ್ಲಿಸಬೇಕು. ಸ್ವಚ್ಛತೆ ಸೇರಿ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ
ಇಂದು ಬಸವ ಜಯಂತಿ ಹಿನ್ನೆಲೆಯಲ್ಲಿ ಇಡೀ ದೇಶವೇ ಬಸವಣ್ಣನವರನ್ನು ಸ್ಮರಿಸುತ್ತಿದೆ. ಇಂತಹ ಕಷ್ಟದ ದಿನಗಳಲ್ಲಿ ಬಸವಣ್ಣನವರ ಮಾತುಗಳು ನಮಗೆಲ್ಲರಿಗೂ ಆದರ್ಶವಾಗಿವೆ ಎಂದು ಮೋದಿ ಹೇಳಿದ್ದಾರೆ.
ಇಂದು ಅಕ್ಷಯ ತೃತೀಯ ದಿನವಾಗಿದೆ. ಜೊತೆಗೆ ಬಸವೇಶ್ವರ ಜಯಂತಿ ಇದೆ. ಇಂದು ಯಾವುದೇ ಕಾರ್ಯ ಆರಂಭಿಸಲು ಶುಭ ದಿನವಾಗಿದೆ. ಅಕ್ಷಯ ತೃತೀಯ ದಾನದ ಪ್ರತೀಕವಾಗಿದೆ. ನಾವೆಲ್ಲರೂ ಇನ್ನೊಬ್ಬರಿಗಾಗಿ ದಾನಮಾಡಬೇಕು. ಬೇರೆಯವರಿಗಾಗಿ ಕೆಲಸ ಮಾಡುವುದೇ ಭಾರತದ ಸಂಸ್ಕೃತಿ. ಏನು ನೀಡುತ್ತಿದ್ದೇವೆ, ಎಷ್ಟು ನೀಡುತ್ತಿದ್ದೇವೆ ಎನ್ನುವುದು ಮುಖ್ಯವಲ್ಲ ದಾನ ನೀಡುವುದು ಮುಖ್ಯ ಎಂದು ಹೇಳಿದ್ದಾರೆ.
ಯಾರೂ ಮನೆಯಿಂದ ಹೊರಗೆ ಬರಬೇಡಿ. ಕೊರೋನಾದಿಂದಾಗಿ ಯಾವ ಹಬ್ಬವನ್ನು ಮಾಡಲಾಗುತ್ತಿಲ್ಲ. ಮನೆಯೊಳಗೆ ಹಬ್ಬ ಆಚರಿಸಿ. ಅಭಿವೃದ್ಧಿ ಹೊಂದಲು ಕೊರೋನಾ ವಿರುದ್ಧ ಗೆಲ್ಲಬೇಕಿದೆ. ಸೋಂಕಿನ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ ವಹಿಸಬಾರದು ಎಂದು ತಿಳಿಸಿದ್ದಾರೆ.