ಕೊರೊನಾ ಬಿಕ್ಕಟ್ಟಿನ ಮಧ್ಯೆ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರ ಶೀಘ್ರವೇ ಖುಷಿ ಸುದ್ದಿ ನೀಡಲಿದೆ. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒನ್ ನೇಷನ್-ಒನ್ ರೇಷನ್ ಕಾರ್ಡ್ ಸೇವೆ ಜಾರಿಗೆ ತರಲಿದೆ. ಜೂನ್ 1ರಿಂದ ಈ ಸೇವೆ ಶುರುವಾಗಲಿದೆ ಎನ್ನಲಾಗ್ತಿದೆ.
ಸುಪ್ರೀಂ ಕೋರ್ಟ್ ಕೂಡ ಆದಷ್ಟು ಬೇಗ ಒನ್ ನೇಷನ್-ಒನ್ ರೇಷನ್ ಕಾರ್ಡ್ ಸೇವೆ ಶುರು ಮಾಡುವಂತೆ ಸೂಚನೆ ನೀಡಿದೆ. ಕೇಂದ್ರ ಸರ್ಕಾರದ ಈ ಯೋಜನೆ ಲಾಕ್ ಡೌನ್ ಸಂದರ್ಭದಲ್ಲಿ ಸಾಕಷ್ಟು ಪ್ರಯೋಜನಕಾರಿಯಾಗಲಿದೆ.ಈ ಯೋಜನೆ ಪ್ರಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಅರ್ಹ ಫಲಾನುಭವಿಗಳು ತಮ್ಮ ಆಹಾರ ಧಾನ್ಯಗಳ ಪಾಲನ್ನು ದೇಶದ ಯಾವುದೇ ನ್ಯಾಯಯುತ ಬೆಲೆ ಅಂಗಡಿಯಿಂದ ಒಂದೇ ಪಡಿತರ ಚೀಟಿ ಬಳಸಿ ಪಡೆಯಲು ಸಾಧ್ಯವಾಗುತ್ತದೆ.
ಜೂನ್ 1 ರಿಂದ ಒಟ್ಟು 20 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಪಡಿತರ ಚೀಟಿ ಪೋರ್ಟಬಿಲಿಟಿ ಪ್ರಾರಂಭಿಸಲು ಸಿದ್ಧವಾಗಲಿವೆ. ದೇಶಾದ್ಯಂತ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಎಲ್ಲಾ ಪಿಡಿಎಸ್ ಅಂಗಡಿಗಳಲ್ಲಿ ಪಿಒಎಸ್ ಯಂತ್ರಗಳನ್ನು ಅಳವಡಿಸಲಾಗುವುದು.