ಭಾಗಲಪುರ: ಆ ದಂಪತಿ ಸೈಕಲ್ನಲ್ಲಿ 400 ಕಿ.ಮೀ. ಪ್ರಯಾಣ ನಡೆಸಿದ್ದರು. ಇನ್ನೂ 230 ಕಿ.ಮೀ. ತೆರಳಿದ್ದರೆ ಗುರಿ ತಲುಪುತ್ತಿದ್ದರು. ಆದರೆ, ನಡುವೆ ಸಿಕ್ಕ ಲಾರಿ ಏರಿದ ದಂಪತಿ ಸ್ಮಶಾನ ಸೇರುವಂತಾಗಿದೆ.
ಎರಡು ಲಾರಿಗಳ ನಡುವೆ ರಾಷ್ಟ್ರೀಯ ಹೆದ್ದಾರಿ 31 ರಲ್ಲಿ ಶುಕ್ರವಾರ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
ಬಿಹಾರ ಭಾಗಲಪುರ ಜಿಲ್ಲೆಯ ನೌಗಂಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೂವರು ಗಾಯಗೊಂಡಿದ್ದಾರೆ. ನಲಂದಾ ಜಿಲ್ಲೆಯ ಖಾರಿಕ್ ಪೊಲೀಸ್ ಠಾಣಾ ವ್ಯಾಪ್ತಿಯ ಲಾರಿ ಚಾಲಕ ಗುಂಜನ್, ಸಹಾಯಕ ಸುನೀಲ್, ಜಾರ್ಖಂಡ ರಾಜ್ಯದ ರಾಂಚಿಯ ಗೋಪಾಲ ಪಾಂಡೆ ಹಾಗೂ ಆತನ ಪತ್ನಿ ಉಷಾ ದೇವಿ ಮೃತರು.
ಜಾರ್ಖಂಡ ಮೂಲದ ದಂಪತಿ ಲಾಕ್ ಡೌನ್ ಕಾರಣಕ್ಕೆ ಬಸ್ ಸೌಲಭ್ಯವಿಲ್ಲದ ಕಾರಣ ರಾಂಚಿಯಿಂದ ಪಾಟ್ನಾಕ್ಕೆ ಸೈಕಲ್ ನಲ್ಲಿ ತೆರಳುತ್ತಿದ್ದರು. ಸುಮಾರು 400 ಕಿ.ಮೀ. ಕ್ರಮಿಸಿದ ನಂತರ ಸಿಕ್ಕ ನಾಗುಚಿಯಾ ಸಮೀಪ ಲಾರಿ ಏರಿದ್ದರು. ಸರನ್ ಜಿಲ್ಲೆಯ ಉಳಿದ ಮೂರು ಕಾರ್ಮಿಕರು ಕಟಿಹಾರ ಫ್ಯಾಕ್ಟರಿಯಿಂದ 75 ಕಿ.ಮೀ. ನಡೆದು ಬಂದು ಲಾರಿ ಏರಿದ್ದರು. ಹಾಜಿಪುರ್ ನಲ್ಲಿ ಇಳಿದು ತಮ್ಮ ಪ್ರಯಾಣ ಮುಂದುವರಿಸುವವರಿದ್ದರು.
ಗಂಭೀರವಾಗಿ ಗಾಯಗೊಂಡವರನ್ನು ನಗುಚಿಯಾ ಸರ್ದಾರ್ ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನೊಂದು ಲಾರಿ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಲಾರಿ ಬಿಟ್ಟು ಪರಾರಿಯಾಗಿದ್ದಾನೆ.