ನವದೆಹಲಿ: ನೈರುತ್ಯ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ವಾಯುಭಾರ ಕುಸಿತ ಉಂಟಾಗಿದ್ದು ಮುಂದಿನ ಒಂದೆರಡು ದಿನಗಳಲ್ಲಿ ಅದು ವೇಗ ಪಡೆದುಕೊಳ್ಳಲಿದೆ. ಮುಂಗಾರು ಮಾರುತಗಳ ಚಲನೆಗೆ ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತಿದ್ದು, ನಿಗದಿತ ಅವಧಿಗೂ ಮೊದಲೇ ನೈಋತ್ಯ ಮುಂಗಾರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಕ್ಕೆ ಪ್ರವೇಶಿಸಲಿದೆ.
ಮೇ 16 ರಂದು ಮುಂಗಾರು ಅಂಡಮಾನ್ ಪ್ರವೇಶಿಸುವ ಸಾಧ್ಯತೆ ಇದ್ದು, ಅದಾಗಿ 15 ದಿನಕ್ಕೆ ಅಂದರೆ ಜೂನ್ 1 ಕ್ಕೆ ಕೇರಳ ಕರಾವಳಿಗೆ ಪ್ರವೇಶಿಸಲಿದೆ. ಇದಾದ 3 -4 ದಿನಗಳಲ್ಲಿ ಕರ್ನಾಟಕದಲ್ಲಿ ಮುಂಗಾರು ಮಳೆಯಾಗುವ ಸಾಧ್ಯತೆ ಇದೆ.
ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವಂತೆ ಈ ಬಾರಿ ಅವಧಿಗೂ ಮೊದಲೇ ಮುಂಗಾರು ಪ್ರವೇಶಿಸಲಿದೆ. ಲಾಕ್ಡೌನ್ ಪರಿಣಾಮ ನಗರ ಪ್ರದೇಶದಲ್ಲಿದ್ದ ವಲಸೆ ಕಾರ್ಮಿಕರು ಹಳ್ಳಿಗಳಲ್ಲಿ ನೆಲೆಸಿದ್ದು ಈ ಬಾರಿ ಕೃಷಿ ಚಟುವಟಿಕೆ ಇನ್ನಷ್ಟು ಚುರುಕುಗೊಳ್ಳಲಿದೆ. ಉತ್ತಮ ಮುಂಗಾರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿರುವುದು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವವರಿಗೆ ಆಶಾದಾಯಕವಾಗಿದೆ.
ಸಾಮಾನ್ಯವಾಗಿ ಮೇ 22ರ ವೇಳೆಗೆ ಮುಂಗಾರು ಅಂಡಮಾನ್ ದ್ವೀಪ ಸಮೂಹ ಪ್ರವೇಶಿಸುತ್ತದೆ. ಬದಲಾದ ಹವಾಮಾನದಿಂದಾಗಿ ಬೇಗನೆ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ರಾಜ್ಯದಲ್ಲಿ ಜೂನ್ ಮೊದಲ ವಾರದಿಂದಲೇ ಮುಂಗಾರು ಆರಂಭವಾಗಲಿದೆ. ಈ ಬಾರಿ ವಾಡಿಕೆಗಿಂತ ಜಾಸ್ತಿ ಮಳೆಯಾಗಲಿದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಕೃಷಿ ಚಟುವಟಿಕೆ ವೇಗ ಪಡೆದುಕೊಂಡಿದ್ದು ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.