ಕೊರೊನಾ ನಿಯಂತ್ರಣಕ್ಕಾಗಿ ಲಾಕ್ಡೌನ್ ಘೋಷಿಸಿದ ಪರಿಣಾಮ ಕೆಲಸವಿಲ್ಲದೆ ಅತಂತ್ರವಾಗಿದ್ದ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಮುಂದಾಗಿದ್ದರು. ಹೀಗಾಗಿ ‘ಶ್ರಮಿಕ್’ ರೈಲುಗಳ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ತೆರಳುತ್ತಿದ್ದಾರೆ.
ಶನಿವಾರ ಮುಂಬೈನ ಕಲ್ಯಾಣ್ ನಿಂದ ಹೊರಟಿದ್ದ ಶ್ರಮಿಕ್ ರೈಲಿನ ಪ್ರಯಾಣಿಕರಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದರೂ ಕೂಡ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದಾಗಿ ವಲಸೆ ಕಾರ್ಮಿಕರು ಹಸಿವಿನಿಂದ ಕಂಗೆಟ್ಟು ಹೋಗಿದ್ದರು.
ಸೋಮವಾರ ಬೆಳಿಗ್ಗೆ ಈ ರೈಲು ಮಧ್ಯಪ್ರದೇಶದ ಇಟಾರ್ಸಿ ನಿಲ್ದಾಣಕ್ಕೆ ಬಂದಿದ್ದು, ಈ ವೇಳೆ ಫ್ಲಾಟ್ ಫಾರಂ ಮೇಲೆ ಆಹಾರ ಸಾಮಗ್ರಿಗಳನ್ನು ತಳ್ಳುಗಾಡಿಯಲ್ಲಿ ಇರಿಸಿರುವುದು ಇವರುಗಳಿಗೆ ಕಂಡುಬಂದಿದೆ. ಕೂಡಲೇ ಅದಕ್ಕೆ ಮುಗಿಬಿದ್ದ ಪ್ರಯಾಣಿಕರು ಸಿಕ್ಕಷ್ಟನ್ನು ಕೈಗೆತ್ತಿಕೊಂಡಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.