ಲಾಕ್ ಡೌನ್ ಜಾರಿಯಾದ ನಂತರದಲ್ಲಿ ವಲಸೆ ಕಾರ್ಮಿಕರ ಪರಿಸ್ಥಿತಿ ಹೇಳತೀರದಾಗಿದೆ. ಕೆಲಸವಿಲ್ಲದಂತಾದ ವಲಸೆ ಕಾರ್ಮಿಕರು ಊರಿಗೆ ತೆರಳಿದ್ದಾರೆ.
ಅದೇ ರೀತಿ ವಲಸೆ ಕಾರ್ಮಿಕನೊಬ್ಬ 700 ಕಿಲೋಮೀಟರ್ ದೂರದ ಊರಿಗೆ ಗರ್ಭಿಣಿ ಪತ್ನಿ ಮತ್ತು ಮಗುವನ್ನು ಕರೆದುಕೊಂಡು ಹೋಗಲು ತಾವೇ ಕೈಗಾಡಿ ತಯಾರಿಸಿದ್ದಾರೆ. ಮಧ್ಯಪ್ರದೇಶದ ಯುವ ವಲಸೆ ಕಾರ್ಮಿಕ ರಾಮು ತನ್ನ ಗರ್ಭಿಣಿ ಪತ್ನಿ ಧನ್ವಂತಾ ಮತ್ತು ಪುತ್ರಿ ಅನುರಾಗಿಣಿಯನ್ನು ಹೈದರಾಬಾದ್ ನಿಂದ ಮಧ್ಯಪ್ರದೇಶಕ್ಕೆ ಕರೆದುಕೊಂಡು ಬಂದಿದ್ದಾರೆ.
ಲಾಕ್ ಡೌನ್ ಜಾರಿಯಾಗಿದ್ದರಿಂದ ಪ್ರಯಾಣಕ್ಕೆ ಅವರಿಗೆ ಯಾವುದೇ ಬಸ್ ಅಥವಾ ಟ್ರಕ್ ಸಿಗಲಿಲ್ಲ. ಮರ ಮತ್ತು ಕೋಲುಗಳಿಂದ ತಾತ್ಕಾಲಿಕ ಕೈಗಾಡಿಯೊಂದನ್ನು ರೆಡಿಮಾಡಿಕೊಂಡು ರಾಮು 700 ಕಿಲೋಮೀಟರ್ ದೂರ ಮಗಳು ಮತ್ತು ಗರ್ಭಿಣಿ ಪತ್ನಿಯನ್ನು ಕರೆದುಕೊಂಡು ಬಂದಿದ್ದಾರೆ.
ಇದನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ವೈರಲ್ ಆಗಿದೆ. 700 ಕಿಲೋಮೀಟರ್ ದೂರವನ್ನು ಕ್ರಮಿಸಿದ ರಾಮು ಬಾಲಾಘಾಟ್ ಜಿಲ್ಲೆಯ ತಮ್ಮ ಗ್ರಾಮವನ್ನು ತಲುಪಿದ್ದಾರೆ.
ಮೊದಲು ಮಗಳನ್ನು ಹೊತ್ತುಕೊಂಡು ನಡೆಯಲು ಪ್ರಯತ್ನಿಸಿದೆ. ಆದರೆ ಗರ್ಭಿಣಿ ಪತ್ನಿ ಕಾಲ್ನಡಿಗೆಯಲ್ಲಿ ಅಷ್ಟು ದೂರ ನಡೆಯುವುದು ಕಷ್ಟಕರವಾಗಿತ್ತು. ದಾರಿಯಲ್ಲಿ ಕಾಡುಗಳಲ್ಲಿ ಸಿಕ್ಕ ಬಡಿಗೆ ಮತ್ತು ಕೋಲುಗಳಿಂದ ತಾತ್ಕಾಲಿಕ ಗಾಡಿ ನಿರ್ಮಿಸಿಕೊಂಡು ಪತ್ನಿ, ಮಗಳನ್ನು ಕರೆದುಕೊಂಡು ಬಂದಿದ್ದೇನೆ ಎಂದು ರಾಮು ಹೇಳಿದ್ದಾರೆ.
ಉಪ-ವಿಭಾಗೀಯ ಅಧಿಕಾರಿ ನಿತೇಶ್ ಬಾರ್ಗವ್ ನೇತೃತ್ವದ ಅಧಿಕಾರಿಗಳು, ಪೊಲೀಸರ ತಂಡ, ರಾಮು ಸೇರಿದಂತೆ ಮೂವರಿಗೂ ಆಹಾರ ಒದಗಿಸಿ, ರಾಮು ಅವರ ಮಗಳಿಗೆ ಹೊಸ ಚಪ್ಪಲಿ ಕೊಡಿಸಿದೆ. ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಬಾಲಾಘಾಟ್ ನಲ್ಲಿರುವ ಹಳ್ಳಿಗೆ ವಾಹನದಲ್ಲಿ ಕಳುಹಿಸಲಾಗಿದೆ. 14 ದಿನಗಳ ಕಾಲ ಅಲ್ಲಿ ಅವರು ಹೋಮ್ ಕ್ವಾರಂಟೈನ್ ನಲ್ಲಿ ಇರಲಿದ್ದಾರೆ ಎಂದು ತಿಳಿಸಿದ್ದಾರೆ.