ಉತ್ತರ ಪ್ರದೇಶದ ಕೌಶಂಬಿಯಲ್ಲಿ ಭಗವಾನ್ ವಿಷ್ಣುವಿನ ಪ್ರಾಚೀನ ವಿಗ್ರಹ ಪತ್ತೆಯಾಗಿದೆ. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರು ಕೊಳವನ್ನು ಅಗೆಯುವ ಸಂದರ್ಭದಲ್ಲಿ ವಿಷ್ಣುವಿನ ವಿಗ್ರಹ ಕಂಡು ಬಂದಿದೆ.
ಕೌಶಂಬಿ ಜಿಲ್ಲೆಯ ರಸಲ್ಪೂರ್ ಬಡಗಾವ್ ಗ್ರಾಮದಲ್ಲಿ ಸುಮಾರು 150 ಉದ್ಯೋಗ ಖಾತ್ರಿ ಯೋಜನೆ ಕಾರ್ಮಿಕರು ಕುಂಬಿ ಕೊಳದಲ್ಲಿನ ಹೂಳು ತೆಗೆಯುತ್ತಿದ್ದ ಸಂದರ್ಭದಲ್ಲಿ ಕಾರ್ಮಿಕರೊಬ್ಬರು ವಿಗ್ರಹದ ಮೇಲೆ ಎಡವಿ ಬಿದ್ದಿದ್ದಾರೆ. ಪರಿಶೀಲನೆ ನಡೆಸಿದಾಗ ವಿಗ್ರಹ ಗೋಚರಿಸಿದ್ದು ಗ್ರಾಮದ ಮುಖಂಡರು ಮತ್ತು ಬ್ಲಾಕ್ ಅಭಿವೃದ್ಧಿ ಅಧಿಕಾರಿಗೆ ಮಾಹಿತಿ ನೀಡಲಾಗಿದೆ.
ನಂತರ ಜಿಲ್ಲೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪ್ರಾಚೀನ ವಿಗ್ರಹವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಪುರಾತತ್ವ ಸರ್ವೆ ಆಫ್ ಇಂಡಿಯಾ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. 12ನೇ ಶತಮಾನಕ್ಕೆ ಸೇರಿದ ವಿಗ್ರಹ ಇದಾಗಿದೆ ಎಂದು ಮಾಹಿತಿ ನೀಡಿರುವುದಾಗಿ ಕೌಶಂಬಿ ಜಿಲ್ಲಾಧಿಕಾರಿ ಮನೀಶ್ ಕುಮಾರ್ ವರ್ಮಾ ತಿಳಿಸಿದ್ದಾರೆ.
ಪ್ರಸ್ತುತ ಈ ವಿಗ್ರಹ ಖಜಾನೆ ಇಲಾಖೆಯ ವಶದಲ್ಲಿದ್ದು ಪುರಾತತ್ವ ಇಲಾಖೆ ಮತ್ತು ಅಲಹಾಬಾದ್ ಮ್ಯೂಸಿಯಂ ತಂಡಗಳು ಇದನ್ನು ಪರಿಶೀಲನೆ ನಡೆಸಲಿದೆ. 4 ತೋಳುಗಳನ್ನು ಹೊಂದಿರುವ ಶಂಕ ಚಕ್ರ ಸಹಿತ ವಿಷ್ಣುವಿನ ಪ್ರಾಚೀನ ವಿಗ್ರಹ ಇದಾಗಿದೆ. ಹಿಂದೂ ಸಂಘಟನೆಯ ಮುಖಂಡರು ಸ್ಥಳದಲ್ಲಿ ಜಮಾಯಿಸಿ ಇಲ್ಲಿ ವಿಷ್ಣುವಿನ ವಿಗ್ರಹ ದೊರೆತಿರುವುದರಿಂದ ಅದನ್ನು ದೇವಸ್ಥಾನದಲ್ಲಿಯೇ ಇರಿಸಬೇಕೆಂದು ಹೇಳಿದ್ದಾರೆ.