ಕೇರಳ ರಾಜ್ಯದ ಜಲ ಸಾರಿಗೆ ಇಲಾಖೆಯ 70 ಆಸನಗಳ ದೋಣಿಯೊಂದು ಅಲಪ್ಪುಳ ಜಿಲ್ಲೆಯ ಎಂಎನ್ ಬ್ಲಾಕ್ ನಿಂದ ಕೇವಲ ಒಬ್ಬ ಪ್ರಯಾಣಿಕರನ್ನು ಕೊಟ್ಟಾಯಂನ ಕಾಂಜಿರಾಮ್ ಗೆ ಕರೆದೊಯ್ಯಿತು.
ಇದರಲ್ಲೇನು ವಿಶೇಷ ಎನ್ನುತ್ತೀರಾ..? ಆ ಒಬ್ಬ ಪ್ರಯಾಣಿಕರು ಪರೀಕ್ಷಾ ಕೇಂದ್ರಕ್ಕೆ ತೆರಳಬೇಕಿದ್ದ ವಿದ್ಯಾರ್ಥಿನಿಯಾಗಿದ್ದರು. ಈ ವಿದ್ಯಾರ್ಥಿನಿಗಾಗಿಯೇ ಪ್ರಯಾಣಕ್ಕೆ ಈ ವ್ಯವಸ್ಥೆ ಮಾಡಲಾಗಿತ್ತು.
ಲಾಕ್ಡೌನ್ ಬಳಿಕ ಕುಟ್ಟನಾಡು ಪ್ರದೇಶದ ಪ್ರಯಾಣಿಕರ ದೋಣಿಗಳ ಸೇವೆಯನ್ನು ರದ್ದುಪಡಿಸಲಾಗಿದೆ. ಇದೀಗ ಸಾರ್ವತ್ರಿಕ ಪರೀಕ್ಷೆಯ ದಿನಾಂಕಗಳು ಪ್ರಕಟಗೊಂಡ ಹಿನ್ನೆಲೆಯಲ್ಲಿ ಆಕೆಗೆ ಪರೀಕ್ಷಾ ಕೇಂದ್ರ ತಲುಪುವುದು ಕಷ್ಟವಾಗಿತ್ತು.
ಎಚ್.ಎಸ್.ಸಿ. ಪರೀಕ್ಷೆ (ಪ್ಲಸ್ ಒನ್) ಎದುರಿಸಬೇಕಿದ್ದ ವಿದ್ಯಾರ್ಥಿನಿ ಸಾಂಡ್ರಾ ತನ್ನ ಆತಂಕವನ್ನು ಸಂಬಂಧಪಟ್ಟ ಸರ್ಕಾರಿ ಕಚೇರಿಗೆ ಕರೆ ಮಾಡಿ ತಿಳಿಸಿದ್ದರು. ಈ ವೇಳೆ ದೋಣಿ ಕಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಪರೀಕ್ಷೆ ದಿನದಂದು ಬೆಳಗ್ಗೆ 11.30ಕ್ಕೆ ಎಪ್ಪತ್ತು ಸೀಟಿನ ದೋಣಿಯು ಆಕೆಯ ಮನೆಯ ಸಮೀಪದ ಜಟ್ಟಿಯಿಂದ ಹೊರಟಿತು. ಪರೀಕ್ಷೆ ಮುಗಿದ ಬಳಿಕ ಆಕೆಯನ್ನು ಮನೆಗೆ ತಲುಪಿಸಿತು.