ಖ್ಯಾತ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮ ಯಾರಿಗೆ ಗೊತ್ತಿಲ್ಲ ಹೇಳಿ. ಈ ಕಾರ್ಯಕ್ರಮದಲ್ಲಿ ಕೇಳುವ ರಸಪ್ರಶ್ನೆಗಳಿಗೆ ಸರಿಯುತ್ತರ ನೀಡಿ ಹಲವಾರು ಮಂದಿ ಕೋಟ್ಯಾಧಿಪತಿಗಳಾಗಿದ್ದಾರೆ. ಹೀಗೆ ಈ ಹಿಂದೆ ಕೋಟ್ಯಾಧಿಪತಿಯಾಗಿದ್ದ 14 ವರ್ಷದ ಬಾಲಕ ಈಗ ಐಪಿಎಸ್ ಅಧಿಕಾರಿಯಾಗಿದ್ದಾರೆ.
ವಾಯುಸೇನೆಯ ಅಧಿಕಾರಿಯೊಬ್ಬರ ಮಗ ರವಿ ಮೋಹನ್ ಸೈನಿ 10ನೇ ತರಗತಿ ಓದುತ್ತಿದ್ದಾಗ 2001 ರಲ್ಲಿ ನಡೆದ ಕೆಬಿಸಿ ಜೂನಿಯರ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಪಾಲ್ಗೊಂಡಿದ್ದರು. ಈ ವೇಳೆ ಅಮಿತಾಬ್ ಬಚ್ಚನ್ ಕೇಳಿದ 15 ಪ್ರಶ್ನೆಗಳಿಗೆ ಸರಿ ಉತ್ತರ ನೀಡಿ ಒಂದು ಕೋಟಿ ರೂಪಾಯಿ ಗೆದ್ದಿದ್ದರು.
‘ಕೌನ್ ಬನೇಗಾ ಕರೋಡ್ಪತಿ’ ನಿಯಮದ ಪ್ರಕಾರ ರವಿ ಮೋಹನ್ ಅವರಿಗೆ ಹದಿನೆಂಟು ವರ್ಷವಾದಾಗ ಈ ಹಣ ತೆರಿಗೆ ಎಲ್ಲಾ ಹೋಗಿ 69 ಲಕ್ಷ ರೂಪಾಯಿ ನೀಡಲಾಗಿತ್ತು. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ವ್ಯಾಸಂಗದ ಬಳಿಕ ರಾಜಸ್ಥಾನದ ಜೈಪುರದಲ್ಲಿ ರವಿ ಮೋಹನ್ ಸೈನಿ ಎಂಬಿಬಿಎಸ್ ಪೂರ್ಣಗೊಳಿಸಿದ್ದರು.
ನಂತರ ಐಪಿಎಸ್ ಅಧಿಕಾರಿಯಾಗಬೇಕೆಂಬ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಪರೀಕ್ಷೆ ಬರೆದಿದ್ದು, 2014ರಲ್ಲಿ ಅಖಿಲ ಭಾರತ ಮಟ್ಟದಲ್ಲಿ 461ನೇ ರಾಂಕ್ ಗಳಿಸುವ ಮೂಲಕ ತಮ್ಮ ಗುರಿ ಸಾಧಿಸಿದ್ದರು. ಆ ಬಳಿಕ ಗುಜರಾತ್ ನ ರಾಜ್ ಕೋಟ್ ನಗರದಲ್ಲಿ ಡಿಎಸ್ಪಿ ಆಗಿ ಸೇವೆ ಸಲ್ಲಿಸಿದ್ದು, ಇದೀಗ ಪೋರ ಬಂದರ್ ಜಿಲ್ಲೆಯ ರಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.