ಭೀಕರ ಚಂಡಮಾರುತ ಅಂಫಾನ್ ಭಾರತ ಮತ್ತು ಬಾಂಗ್ಲಾದೇಶದಲ್ಲಿ ತೀವ್ರ ಸ್ವರೂಪದ ಹಾನಿ ಉಂಟುಮಾಡಿದೆ. ಭಾರಿ ಗಾಳಿ ಮಳೆಗೆ ಪೂರ್ವ ಕರಾವಳಿಯ ಒಡಿಶಾದ 12 ಹಾಗೂ ಪಶ್ಚಿಮ ಬಂಗಾಳದ ಕರಾವಳಿಯ ಎರಡು ಜನ ಮೃತಪಟ್ಟಿದ್ದಾರೆ.
ಗಂಟೆಗೆ 185 ಕಿಮೀ ವೇಗದಲ್ಲಿ ಚಂಡಮಾರುತ ಒಡಿಶಾ ಕರಾವಳಿಗೆ ಅಪ್ಪಳಿಸಿದ್ದು, ಸಾಕಷ್ಟು ಮನೆಗಳು ಕುಸಿದಿದ್ದು, ಮರಗಳು ಮುರಿದು ಬಿದ್ದಿವೆ. ರಸ್ತೆ ಹಾಳಾಗಿದೆ.
ಬಂಗಾಳ ಕೊಲ್ಲಿಯ ಉತ್ತರ ಭಾಗದಲ್ಲಿ ಸಮುದ್ರ ಅಬ್ಬರಿಸುತ್ತಿದ್ದು, ಇನ್ನೂ 12 ಗಂಟೆಯವರೆಗೆ ಅದೇ ಪರಿಸ್ಥಿತಿ ಮುಂದುವರಿಯಲಿದೆ. ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಒಡಿಶಾದಲ್ಲಿ ಭಾರಿ ಗಾಳಿ, ಮಳೆಯಿಂದ ಉಂಟಾದ ಹಾನಿಯನ್ನು ಅಧಿಕಾರಿಗಳು ಲೆಕ್ಕ ಹಾಕುತ್ತಿದ್ದಾರೆ.
ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ಮಳೆ ನಿಂತಿದೆ. ಆಕಾಶ ತಿಳಿಗೆಂಪು ಬಣ್ಣಕ್ಕೆ ತಿರುಗಿದೆ. ಜನ ಅದರ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ.
ಅಂಫಾನ್ ಅಟ್ಟಹಾಸದ ಮುನ್ಸೂಚನೆ ಅರಿತ ಸರ್ಕಾರಗಳು ಪಶ್ಚಿಮ ಬಂಗಾಳ ಕರಾವಳಿಯಲ್ಲಿ 5 ಲಕ್ಷ ಹಾಗೂ ಒಡಿಶಾ ಕರಾವಳಿಯಲ್ಲಿ 1.5 ಲಕ್ಷ ಜನರನ್ನು ಸ್ಥಳಾಂತರ ಮಾಡಿವೆ.
ಒಡಿಶಾದ ಸುಂದರ ಬನ್ ಪ್ರದೇಶ ಹಾಗೂ ಪಶ್ಚಿಮ ಬಂಗಾಳದ ಆರು ಜಿಲ್ಲೆಗಳು ಧಾರಾಕಾರ ಮಳೆಗೆ ನಲುಗಿವೆ. ಸಾಗರ ದ್ವೀಪದ ಸಮೀಪ ಭೂ ಕುಸಿತವಾಗಿದೆ. 1999 ಸುಪರ್ ಸೈಕ್ಲೋನ್ ಬಳಿಕ ಅಂಫಾನ್ ಅತಿ ತೀವ್ರವಾದ ಬಿರುಗಾಳಿಯಾಗಿದೆ. ಥೈಲ್ಯಾಂಡ್ ನಲ್ಲಿ ಅಂಫಾನ್ ಎಂದರೆ ಆಕಾಶ ಎಂಬ ಅರ್ಥವಿದೆ.