ಈರೋಡ್: ಜನಿಸಲಿರುವ ಮಗು ನಿನಗೆ ಅಪಾಯ, ಅನಾರೋಗ್ಯ ತಂದೊಡ್ಡುತ್ತದೆ ಎಂದು ಜ್ಯೋತಿಷಿ ಹೇಳಿದ ಮಾತು ನಂಬಿದ ವ್ಯಕ್ತಿಯೊಬ್ಬ ಗರ್ಭಿಣಿ ಪತ್ನಿಯ ಹೊಟ್ಟೆಗೆ ಬಲವಾಗಿ ಹೊಡೆದ ಪರಿಣಾಮ ಮಗು ಹೊಟ್ಟೆಯಲ್ಲೇ ಮೃತಪಟ್ಟಿದೆ.
ತಮಿಳುನಾಡಿನ ಈರೋಡ್ ನಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ತುಂಬು ಗರ್ಭಿಣಿ ಪತ್ನಿಯ ಹೊಟ್ಟೆಗೆ ಹೊಡೆದ ಪತಿರಾಯ ಅಮಾನವೀಯವಾಗಿ ವರ್ತಿಸಿದ್ದು ಪತ್ನಿಗೆ ಬಲವಾಗಿ ಹೊಡೆದ ಕಾರಣ ಗರ್ಭಪಾತವಾಗಿದೆ. ಮುನಿಸ್ವಾಮಿ ಎಂಬಾತನೇ ಇಂತಹ ಕೃತ್ಯವೆಸಗಿದ ವ್ಯಕ್ತಿ.
6 ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿಗೆ 5 ವರ್ಷದ ಗಂಡು ಮಗು ಇದೆ. ಕೌಟುಂಬಿಕ ಕಲಹದ ಕಾರಣದಿಂದ ಪತ್ನಿ ತವರು ಮನೆಗೆ ಹೋಗಿದ್ದು ಹಿರಿಯರೆಲ್ಲ ಸೇರಿ ಇಬ್ಬರ ಮನವೊಲಿಸಿ ಗಂಡನ ಮನೆಗೆ ಪತ್ನಿ ಕಳಿಸಿದ್ದಾರೆ.
ಪತ್ನಿ ಗರ್ಭಿಣಿಯಾಗಿದ್ದರಿಂದ ಮುನಿಸ್ವಾಮಿ ಜ್ಯೋತಿಷಿಯ ಹತ್ತಿರ ಶಾಸ್ತ್ರ ಕೇಳಲು ಹೋಗಿದ್ದು ಮಗು ಜನಿಸಿದರೆ ದುರಾದೃಷ್ಟ ಎದುರಾಗುತ್ತದೆ. ನಿನ್ನ ಜೀವಕ್ಕೆ ಅಪಾಯವಿದೆ ಎಂದು ಜ್ಯೋತಿಷಿ ಹೇಳಿದ್ದಾನೆ. ಜ್ಯೋತಿಷಿ ಮಾತು ನಂಬಿದ ಮುನಿಸ್ವಾಮಿ ಪತ್ನಿಗೆ ಮಗುವನ್ನು ತೆಗೆಸುವಂತೆ ಬಲವಂತ ಮಾಡಿದ್ದು, ಇದಕ್ಕೆ ಒಪ್ಪದಿದ್ದಾಗ ಮನಬಂದಂತೆ ಥಳಿಸಿ ಹೊಟ್ಟೆಗೆ ಕಾಲಿನಿಂದ ಬಲವಾಗಿ ಹೊಡೆದಿದ್ದಾನೆ. ಈ ವೇಳೆ ಅಸ್ವಸ್ಥಳಾದ ಮಹಿಳೆಯನ್ನು ಅಕ್ಕಪಕ್ಕದವರು ಆಸ್ಪತ್ರೆಗೆ ಸೇರಿಸಿದ್ದು, ಆಕೆಗೆ ಗರ್ಭಪಾತವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.