ನವದೆಹಲಿ: ಲಾಕ್ಡೌನ್ ಜಾರಿಯಾಗಿದ್ದರಿಂದ ದೇಶದ ಬೇರೆ ಬೇರೆ ಸ್ಥಳದಲ್ಲಿ ಸಿಲುಕಿರುವ ಪ್ರವಾಸಿಗರು, ವಿದ್ಯಾರ್ಥಿಗಳು, ಕಾರ್ಮಿಕರಿಗೆ ಊರಿಗೆ ಹೋಗಲು ಅನುಮತಿ ನೀಡಲಾಗಿದೆ.
ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ವಲಸೆ ಕಾರ್ಮಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಇತರರು ಲಾಕ್ಡೌನ್ ಜಾರಿಯಾಗಿದ್ದರಿಂದ ತಮ್ಮ ಊರುಗಳಿಗೆ ಹೋಗಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ ಊರಿಗೆ ಕಳುಹಿಸಲು ಬಸ್ ವ್ಯವಸ್ಥೆ ಮಾಡಬೇಕೆಂದು ಸೂಚನೆ ನೀಡಲಾಗಿದೆ.
ಜನರನ್ನು ಕರೆದುಕೊಂಡು ಹೋಗಲು ಸ್ಯಾನಿಟೈಸ್ ಮಾಡಿದ ಬಸ್ ಬಳಕೆ ಮಾಡಬೇಕು. ಆರೋಗ್ಯ ತಪಾಸಣೆ ಮಾಡಿ ಕೊರೋನಾ ಸೋಂಕು ಇಲ್ಲದವರನ್ನು ಮಾತ್ರ ಕರೆದುಕೊಂಡು ಹೋಗಬೇಕು. ಆರೋಗ್ಯ ಸೇತು ಆಪ್ ಕಡ್ಡಾಯವಾಗಿ ಬಳಸಬೇಕು. ಬಸ್ ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮತ್ತೊಂದು ರಾಜ್ಯಕ್ಕೆ ಪ್ರಯಾಣಿಸುವ ಮೊದಲು ಆ ರಾಜ್ಯದ ಜೊತೆಗೆ ಚರ್ಚೆ ನಡೆಸಬೇಕು. ನಿಗದಿತ ಸ್ಥಳ ತಲುಪಿದ ಬಳಿಕ ವಲಸಿಗರನ್ನು ಕಡ್ಡಾಯವಾಗಿ ಕ್ಯಾರಂಟೈನ್ ಮಾಡಬೇಕು ಎಂದು ತಿಳಿಸಲಾಗಿದೆ.
ಕೇಂದ್ರ ಸರ್ಕಾರ ಊರಿಗೆ ಹೋಗಲು ಅನುಮತಿ ನೀಡಿರುವುದರಿಂದ ಲಕ್ಷಾಂತರ ಮಂದಿ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಯಾತ್ರಾರ್ಥಿಗಳಿಗೆ ಅನುಕೂಲವಾಗಲಿದೆ.