ನವದೆಹಲಿ: ಲಾಕ್ಡೌನ್ 4.0 ಜಾರಿಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾರ್ಗಸೂಚಿಯನ್ನು ಸಿದ್ಧಪಡಿಸಿದ್ದು, ರಾಜ್ಯ ಸರ್ಕಾರಗಳಿಗೆ ನೀತಿ ರೂಪಿಸುವ ಅಧಿಕಾರ ಕೊಡುವ ಸಾಧ್ಯತೆ ಇದೆ.
ಇಂದು ಸಂಜೆ ವೇಳೆಗೆ ಕೇಂದ್ರದ ಲಾಕ್ಡೌನ್ ಮಾರ್ಗಸೂಚಿ ಹೊರಬೀಳಲಿದ್ದು, ಹೊಸ ಲಾಕ್ ಡೌನ್ ಜಾರಿಗೆ ಪ್ರಧಾನಿ ಮೋದಿ ಮಾಸ್ಟರ್ ಪ್ಲಾನ್ ಏನು ಎನ್ನುವುದು ಗೊತ್ತಾಗಲಿದೆ. ಲಾಕ್ ಡೌನ್ 4ರ ಮಾರ್ಗಸೂಚಿಯಲ್ಲಿ ಇರುವ ನಿಯಮಗಳೇನು ಎನ್ನುವುದು ಸಂಜೆ ವೇಳೆಗೆ ಗೊತ್ತಾಗಲಿದೆ.
ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಈಗಾಗಲೇ ಸಿದ್ದಪಡಿಸಿದ್ದು ಸಂಜೆ ವೇಳೆಗೆ ಹೊಸ ಮಾರ್ಗಸೂಚಿ ಹೊರಬೀಳಲಿದೆ. ನಿನ್ನೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಹತ್ವದ ಸಭೆ ನಡೆಸಿದ್ದು, ಸಭೆಯಲ್ಲಿ ಲಾಕ್ ಡೌನ್ ವಿನಾಯಿತಿ ನೀಡುವ ಕುರಿತಾಗಿ ಚರ್ಚೆ ನಡೆಸಲಾಗಿದೆ. ಹೊಸ ಮಾರ್ಗಸೂಚಿಯಲ್ಲಿ ಬಹುತೇಕ ರಿಲೀಫ್ ಸಿಗುವ ಸಾಧ್ಯತೆ ಇದೆ.
ಕಂಟೇನ್ಮೆಂಟ್ ಪ್ರದೇಶಗಳಲ್ಲಿ ಮಾತ್ರ ಲಾಕ್ಡೌನ್ ನಿರ್ಬಂಧ ಮುಂದುವರೆಯಲಿದೆ. ವಲಯ ವಿಂಗಡಣೆಯ ಸಂಪೂರ್ಣ ಜವಾಬ್ದಾರಿಯನ್ನು ರಾಜ್ಯಗಳ ಹೆಗಲಿಗೆ ಬಿಡಲಾಗಿದ್ದು, ಎಲ್ಲ ರೀತಿಯ ಕೈಗಾರಿಕೆಗಳ ಪುನರಾರಂಭಕ್ಕೆ ಅನುಮತಿ ನೀಡುವ ಸಾಧ್ಯತೆ ಇದೆ. ಜಿಲ್ಲೆ ಜಿಲ್ಲೆಗಳ ನಡುವೆ ಓಡಾಟಕ್ಕೆ ಅನುಮತಿ ನೀಡಬಹುದಾಗಿದೆ. ಅನ್ಯ ರಾಜ್ಯಗಳಿಗೆ ಹೋಗಲು ಪಾಸ್ ಕಡ್ಡಾಯ ಮುಂದುವರಿಕೆ ಮಾಡಬಹುದು.
ಕಂಟೇನ್ಮೆಂಟ್ ಪ್ರದೇಶ ಹೊರತುಪಡಿಸಿ ಜಿಲ್ಲೆಗಳ ನಡುವೆ ಓಡಾಟಕ್ಕೆ ಅವಕಾಶ ನೀಡಲಾಗುವುದು. ಎಲ್ಲಾ ರೀತಿಯ ವಸ್ತುಗಳ ಆನ್ಲೈನ್ ಮಾರಾಟಕ್ಕೆ ಅವಕಾಶ ನೀಡಲಾಗುವುದು. ಅಗತ್ಯ ವಸ್ತುಗಳ ಜೊತೆಗೆ ಎಲೆಕ್ಟ್ರಾನಿಕ್ಸ್, ಬಟ್ಟೆ ಡಿಲೆವರಿಗೆ ಅವಕಾಶ ನೀಡಲಿದ್ದು, ಇ-ಕಾಮರ್ಸ್ ಇಂಡಸ್ಟ್ರಿಗೆ ಸಂಪೂರ್ಣ ಅನುಮತಿ ನೀಡಲಾಗುವುದು ಎನ್ನಲಾಗಿದೆ.
ಬಾಕಿ ಉಳಿದಿರುವ ಪರೀಕ್ಷೆಗಳಿಗೆ ಮಾತ್ರ ಅವಕಾಶ ನೀಡಲಿದ್ದು, ಶಾಲಾ – ಕಾಲೇಜುಗಳ ಆರಂಭಕ್ಕೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುವುದು. ಮೇ ತಿಂಗಳಲ್ಲಿ ಶಾಲಾ-ಕಾಲೇಜು ಆರಂಭವಾಗುವುದು ಅನುಮಾನ ಎಂದು ಹೇಳಲಾಗಿದೆ.
ಧಾರ್ಮಿಕ, ರಾಜಕೀಯ ಸಭೆ ಸಮಾರಂಭಗಳಿಗೆ ನಿರ್ಬಂಧ ಮುಂದುವರೆಯಲಿದೆ. ದೇವಾಲಯಗಳು ತೆರೆದರೂ ಅಂತರ ಕಾಪಾಡಲು, ಮಾಸ್ಕ್ ಧರಿಸುವುದು ಸೇರಿ ಹಲವು ಮಾರ್ಗಸೂಚಿ ನೀಡುವ ಸಾಧ್ಯತೆ ಇದೆ. ಭಕ್ತರ ಪ್ರವೇಶಕ್ಕೆ ಅನುಮತಿ ನೀಡಿದರೂ ಷರತ್ತುಬದ್ಧ ಅನುಮತಿಯೊಂದಿಗೆ ಅವಕಾಶ ನೀಡಲಾಗುವುದು. ಮದುವೆ, ಅಂತ್ಯಸಂಸ್ಕಾರಗಳಿಗೆ ಷರತ್ತುಬದ್ಧ ಅನುಮತಿ ನೀಡಲಾಗುವುದು. ಸಿನಿಮಾ ಥಿಯೇಟರ್, ಮಾಲ್ ಹಸಿರು, ಕೆಂಪು, ಕಿತ್ತಳೆ ವಲಯದಲ್ಲಿ ಓಪನ್ ಆಗಲ್ಲ. ಸಲೂನ್, ಕಟಿಂಗ್ ಶಾಪ್ ತೆರೆಯುವ ಸಾಧ್ಯತೆಗಳಿವೆ. ಜೂನ್ 30 ರ ವರೆಗೆ ಪ್ರಯಾಣಿಕರ ರೈಲು ಸೇವೆ ಇರಲ್ಲ. ಆಯ್ದ ಮಾರ್ಗಗಳಲ್ಲಿ ಮಾರ್ಗಸೂಚಿಯೊಂದಿಗೆ ವಿಮಾನಯಾನಕ್ಕೆ ಅವಕಾಶ ನೀಡಬಹುದು ಎಂದು ಹೇಳಲಾಗಿದೆ.