ಉತ್ತರಪ್ರದೇಶದ ಷಹಜಾನ್ ಪುರ್ ಜಿಲ್ಲೆಯ ಮಹೌದರ್ಗ್ ಗ್ರಾಮದಲ್ಲಿ ಕಾಡುಹಂದಿ ನಡೆಸಿದ ದಾಳಿಯಲ್ಲಿ ರೈತ ಸಾವನ್ನಪ್ಪಿದ್ದು, ಅವರ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗೋವರ್ಧನ್(55) ಮತಪಟ್ಟ ರೈತ ಎಂದು ಗುರುತಿಸಲಾಗಿದೆ. ಗೋವರ್ಧನ್ ಮತ್ತು ಅವರ ಪತ್ನಿ ಮಲ್ಲಿದೇವಿ ಮಂಗಳವಾರ ಸಂಜೆ ಹೊಲಕ್ಕೆ ಹೋಗುವಾಗ ಕಾಡುಹಂದಿ ಒಮ್ಮೆಲೇ ದಾಳಿ ನಡೆಸಿದೆ. ದಂಪತಿಯ ಕಿರುಚಾಟ ಕೇಳಿದ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ಈ ವೇಳೆ ಕಾಡುಹಂದಿ ಅರಣ್ಯಪ್ರದೇಶದಲ್ಲಿ ಕಣ್ಮರೆಯಾಗಿದೆ.
ಗಾಯಗೊಂಡಿದ್ದ ದಂಪತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಈ ವೇಳೆಗೆ ಗೋವರ್ಧನ್ ಮೃತಪಟ್ಟಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಗ್ರಾಮದ ಮುಖ್ಯಸ್ಥ ಹರಿ ರಾಮ್ ವರ್ಮ, ಒಂದು ವಾರದೊಳಗೆ ನಡೆದ ಎರಡನೇ ದಾಳಿ ಇದಾಗಿದೆ. ಕಾಡು ಹಂದಿ ದಾಳಿಯಿಂದ ರಕ್ಷಣೆಗಾಗಿ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.
ಅರಣ್ಯ ಇಲಾಖೆಯಿಂದ ಮೃತನ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ವಿಭಾಗಿಯ ಅರಣ್ಯ ಅಧಿಕಾರಿ ಎಂ.ಎನ್. ಸಿಂಗ್ ತಿಳಿಸಿದ್ದಾರೆ.