ದೇಶದಲ್ಲಿ ಮೇ 3 ರವರೆಗೆ ಲಾಕ್ ಡೌನ್ ಜಾರಿಯಲ್ಲಿರಲಿದೆ. ಆದ್ರೆ ಏಪ್ರಿಲ್ 20ರ ನಂತ್ರ ಕೆಲ ಸೇವೆಗಳಿಗೆ ರಿಯಾಯಿತಿ ನೀಡಲು ಸರ್ಕಾರ ಮುಂದಾಗಿದೆ. ಲಾಕ್ ಡೌನ್ನಿಂದ ವಿನಾಯಿತಿ ಪಡೆದಿರುವ ಚಟುವಟಿಕೆಗಳು ಮತ್ತು ಸೇವೆಗಳ ಹೊಸ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ.
ಈ ಪಟ್ಟಿಯಲ್ಲಿ ಆರೋಗ್ಯ ರಕ್ಷಣೆ, ಕೃಷಿ, ತೋಟಗಾರಿಕೆ, ಮೀನುಗಾರಿಕೆ ಮತ್ತು ಪಶುಸಂಗೋಪನೆ ಸೇರಿವೆ. ಕೆಲವು ಚಟುವಟಿಕೆಗಳಿಗೆ ಸರ್ಕಾರ ವಿನಾಯಿತಿ ನೀಡಿದ್ದು, ಅದರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ.
ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ, ಸಹಕಾರಿ ಸಾಲ ಸಂಘಗಳು ಮತ್ತು ಗ್ರಾಮೀಣ ಪ್ರದೇಶಗಳಿಗೆ ಬರುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ನಾಳೆಯಿಂದ ಕೆಲಸ ಶುರು ಮಾಡಲಿವೆ. ಕನಿಷ್ಠ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲಿವೆ.
ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಾಣ ಕಾರ್ಯಗಳಿಗೆ ಏಪ್ರಿಲ್ 20 ರಿಂದ ವಿನಾಯಿತಿ ಸಿಗಲಿದೆ. ಗ್ರಾಮೀಣ ಪ್ರದೇಶದ ನೀರು ಸರಬರಾಜು, ವಿದ್ಯುತ್ ಮತ್ತು ಸಂವಹನಕ್ಕೆ ಸಂಬಂಧಿಸಿದ ಯೋಜನೆಗಳು ಮತ್ತು ಚಟುವಟಿಕೆಗಳನ್ನು ಸಹ ಲಾಕ್ ಡೌನ್ ನಿಂದ ವಿನಾಯಿತಿ ನೀಡಲಾಗಿದೆ.
ಬಿದಿರು, ತೆಂಗಿನಕಾಯಿ, ಕೋಕೋ, ಅಡಿಕೆ ಮತ್ತು ಮಸಾಲೆಗಳ ವಹಿವಾಟು, ಕೃಷಿ, ಕೊಯ್ಲು, ಸಂಸ್ಕರಣೆ, ಪ್ಯಾಕೇಜಿಂಗ್ ಮಾರಾಟಕ್ಕೆ ಅವಕಾಶ ನೀಡಲಾಗುತ್ತದೆ.
ಹಣ್ಣು-ತರಕಾರಿ ಬಂಡಿಗಳು, ನೈರ್ಮಲ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು, ದಿನಸಿ ಮತ್ತು ಪಡಿತರ ಅಂಗಡಿಗಳು, ಡೈರಿ ಮತ್ತು ಹಾಲಿನ ಬೂತ್ಗಳು, ಕೋಳಿ ಮಾಂಸ, ಮೀನು ಮತ್ತು ಆಹಾರವನ್ನು ಮಾರಾಟ ಮಾಡುವ ಅಂಗಡಿಗಳು ತೆರೆಯಲಿವೆ.
ಎಲೆಕ್ಟ್ರಿಷಿಯನ್, ಐಟಿ ರಿಪೇರಿ, ಪ್ಲಂಬರ್, ಮೋಟಾರ್ ಮೆಕ್ಯಾನಿಕ್, ಕಾರ್ಪೆಂಟರ್, ಕೊರಿಯರ್, ಡಿಟಿಎಚ್ ಮತ್ತು ಕೇಬಲ್ ಸೇವೆಗಳು, ಇ-ಕಾಮರ್ಸ್ ಕಂಪನಿಗಳು ಕೆಲಸ ಮಾಡಲು ಪ್ರಾರಂಭಿಸಲಿವೆ. ವಿತರಣೆಗೆ ಬಳಸುವ ವಾಹನಗಳಿಗೆ ಅಗತ್ಯ ಅನುಮತಿ ಸಿಗಲಿದೆ. ಗ್ರಾಮೀಣ ಪ್ರದೇಶದ ಅನೇಕ ಸೇವೆಗಳು ಶುರುವಾಗಲಿವೆ.
ಬ್ಯಾಂಕುಗಳು, ಎಟಿಎಂಗಳು ತೆರೆದಿರುತ್ತವೆ. ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ, ಸಿಎನ್ಜಿ, ಎಲ್ಪಿಜಿ ಮತ್ತು ಪಿಎನ್ಜಿ ಪೂರೈಕೆ ಮುಂದುವರಿಯಲಿದೆ. ಅಂಚೆ ಕಚೇರಿಗಳು ತೆರೆದಿರುತ್ತವೆ. ಎಲ್ಲ ಕೆಲಸಗಳಿಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾಗಲಿದೆ. ಔಷಧಿ, ವೈದ್ಯಕೀಯ ಸಾಧನಗಳನ್ನು ತಯಾರಿಸುವ ಕಂಪನಿಗಳು ತೆರೆದಿರಲಿವೆ. ಉತ್ಪಾದನಾ ವಲಯದ ಕಂಪನಿಗಳು ತೆರೆದಿರಲಿವೆ. ಸರ್ಕಾರಿ ಚಟುವಟಿಕೆಗಳಿಗೆ ಮಾತ್ರ ಕೆಲಸ ಮಾಡುವ ಡೇಟಾ ಮತ್ತು ಕಾಲ್ ಸೆಂಟರ್ ತೆರೆದಿರಲಿದೆ.