ನವದೆಹಲಿ: ಏಪ್ರಿಲ್ 15 ರಿಂದ ಎರಡನೇ ಹಂತದ ಲಾಕ್ಡೌನ್ ಜಾರಿಯಲ್ಲಿದ್ದು ಮೇ 3 ರವರೆಗೂ ಮುಂದುವರೆಯಲಿದೆ. ಈ ನಡುವೆ ಕೇಂದ್ರ ಸರ್ಕಾರ ಲಾಕ್ ಡೌನ್ ನಿರ್ಬಂಧಗಳಲ್ಲಿ ಮಹತ್ವದ ಬದಲಾವಣೆ ಮಾಡಿದ್ದು ಸೋಂಕು ಇಲ್ಲದ ಪ್ರದೇಶಗಳಲ್ಲಿ ಷರತ್ತುಬದ್ಧ ವಿನಾಯಿತಿಯನ್ನು ಕೆಲವು ಕ್ಷೇತ್ರಗಳಿಗೆ ನೀಡಲಾಗಿದೆ.
ಕೃಷಿ, ಮೀನುಗಾರಿಕೆ, ಹೈನುಗಾರಿಕೆ ಚಟುವಟಿಕೆ, ರಸ್ತೆ, ನೀರಾವರಿ, ಗ್ರಾಮೀಣ ಭಾಗದ ಕಾಮಗಾರಿ, ಕಟ್ಟಡ, ಕೈಗಾರಿಕೆ, ಆಹಾರ ಸಂಸ್ಕರಣೆ, ಪಶು ಆಸ್ಪತ್ರೆ, ಕೊರಿಯರ್ಸ್, ವಿಮೆ, ಸರ್ಕಾರಿ ಕಾಲ್ ಸೆಂಟರ್, ಎಲೆಕ್ಟ್ರಿಷಿಯನ್, ಪ್ಲಂಬರ್, ಕಾರ್ಪೆಂಟರ್, ಮೆಕಾನಿಕ್, ಕೋಲ್ಡ್ ಸ್ಟೋರೇಜ್, ಉಗ್ರಾಣ ಚಟುವಟಿಕೆಗೆ ವಿನಾಯಿತಿ ಇದೆ.
ಹಣಕಾಸು ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಮುಂಜಾಗ್ರತೆ ವಹಿಸಿ ಕಾರ್ಯನಿರ್ವಹಿಸಲು ಆರ್ಥಿಕ ಕ್ಷೇತ್ರಗಳ ಕಚೇರಿ, ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ.
ಗ್ರಾಮೀಣ ಭಾಗದಲ್ಲಿ ಕೆಲಸ ಮಾಡಲು ಮನ್ರೇಗಾ ಯೋಜನೆ ಕಾರ್ಮಿಕರಿಗೆ ಅವಕಾಶ ನೀಡಲಾಗಿದೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಿ ಮುಂಜಾಗ್ರತೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ.
ದಿನಸಿ, ಹಣ್ಣು-ತರಕಾರಿ, ಆಸ್ಪತ್ರೆ, ಔಷಧಾಲಯ, ವೈದ್ಯಕೀಯ ಸೇವೆ ಮೊದಲಾದ ಅಗತ್ಯ ಸೇವೆಗಳಿಗೆ ಹಿಂದಿನಂತೆಯೇ ಅವಕಾಶ ನೀಡಲಾಗಿದೆ. ಆನ್ಲೈನ್ ಟೀಚಿಂಗ್, ವಾಣಿಜ್ಯ ಚಟುವಟಿಕೆ, ಗೂಡ್ಸ್ ವಾಹನ, ಸರಕು ಸಾಗಣೆ, ನಿರ್ಮಾಣ, ಪ್ಯಾಕಿಂಗ್ ವ್ಯವಸ್ಥೆಗೆ, ಅಗತ್ಯ ವಸ್ತುಗಳ ಸಾಗಾಟಕ್ಕೆ ಅವಕಾಶವಿದೆ.
ಕೆಲಸಕ್ಕೆ ತೆರಳುವವರಿಗೆ ಬೈಕ್ ನಲ್ಲಿ ಒಬ್ಬರು, ಕಾರ್ ನಲ್ಲಿ ಚಾಲಕ ಸೇರಿ ಇಬ್ಬರು ಪ್ರಯಾಣಿಸಬಹುದು. ಹಿಂಬದಿ ಸೀಟಿನಲ್ಲಿ ಒಬ್ಬರು ಮಾತ್ರ ಪ್ರಯಾಣಿಸಬಹುದು. ಸರ್ಕಾರಿ ಕಚೇರಿ, ನೌಕರರು ಕಾರ್ಯ ನಿರ್ವಹಣೆ ಮಾಡಬಹುದಾಗಿದೆ. ಉಳಿದಂತೆ ಸಿನಿಮಾ ಮಂದಿರ, ಮಾಲ್, ಸಾರ್ವಜನಿಕ ಸಾರಿಗೆ ಬಂದ್ ಆಗಿರುತ್ತದೆ. ಹಿಂದಿನ ಲಾಕ್ ಡೌನ್ ನಂತೆಯೇ ಉಳಿದ ಸೇವೆ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದ್ದು ಮುಂದುವರೆಯಲಿದೆ.