ಕೊರೊನಾ ನಿಯಂತ್ರಣಕ್ಕಾಗಿ ದೇಶದಾದ್ಯಂತ ಲಾಕ್ಡೌನ್ ಜಾರಿಯಲ್ಲಿರುವ ಕಾರಣ ಶಾಲಾ – ಕಾಲೇಜುಗಳು ಬಂದ್ ಆಗಿವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಪಾಠ ಮಾಡಲಾಗುತ್ತಿದೆ.
ಆದರೆ ಆನ್ಲೈನ್ ತರಗತಿಗಳಿಗೆ ಹಾಜರಾಗಲು ಎಲ್ಲೆಡೆ ಮೊಬೈಲ್ ನೆಟ್ವರ್ಕ್ ಇರುವುದಿಲ್ಲ. ಲ್ಯಾಪ್ಟಾಪ್, ಕಂಪ್ಯೂಟರ್ ನಂತಹ ಮೂಲಸೌಕರ್ಯಗಳೂ ಕೂಡ ಎಲ್ಲರಿಗೂ ಲಭ್ಯವಿರುವುದಿಲ್ಲ. ಅಲ್ಲದೆ ವಿದ್ಯುತ್ ಸಹ ಕೈಕೊಡುತ್ತಿರುತ್ತದೆ ಎಂಬ ಮಾತುಗಳ ಮಧ್ಯೆ ಕೇರಳದ ಮಲಪ್ಪುರಂನಲ್ಲಿ ದುರಂತ ಘಟನೆಯೊಂದು ನಡೆದು ಹೋಗಿದೆ.
ಮಲಪ್ಪುರಂ ಜಿಲ್ಲೆಯ ವಾಲಂಚರಿ ಗ್ರಾಮದ 9ನೇ ತರಗತಿ ವಿದ್ಯಾರ್ಥಿನಿ 14ವರ್ಷದ ದೇವಿಕಾ ಎಂಬಾಕೆ ತನಗೆ ಆನ್ಲೈನ್ ತರಗತಿಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈಕೆಯ ಮನೆಯ ಯಾವ ಸದಸ್ಯರ ಬಳಿಯೂ ಸ್ಮಾರ್ಟ್ಫೋನ್ ಇರಲಿಲ್ಲವೆನ್ನಲಾಗಿದ್ದು, ಟಿವಿ ಮೂಲಕ ಪಾಠ ಕೇಳಬೇಕೆಂದರೆ ಅದೂ ಸಹ ಕೆಟ್ಟುಹೋಗಿತ್ತು ಎನ್ನಲಾಗಿದೆ. ಇದರಿಂದ ಮನನೊಂದು ವಿದ್ಯಾರ್ಥಿನಿ ಅನಾಹುತ ಮಾಡಿಕೊಂಡಿದ್ದಾಳೆ.