ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕರೋನಾ ಮಹಾಮಾರಿ ಈಗಾಗಲೇ ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದೆ. 40 ಸಾವಿರಕ್ಕೂ ಅಧಿಕ ಮಂದಿ ಸೋಂಕು ಪೀಡಿತರಾಗಿದ್ದು ಇವರುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಕರೋನಾ ನಿಯಂತ್ರಣಕ್ಕಾಗಿ ದೇಶದಾದ್ಯಂತ ಲಾಕ್ಡೌನ್ ಘೋಷಿಸಲಾಗಿದ್ದು, ಮೂರನೇ ಹಂತದ ಲಾಕ್ಡೌನ್ ಮೇ 17ರಂದು ಅಂತ್ಯಗೊಳ್ಳಲಿದೆ. ಇದರ ಮಧ್ಯೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ವಿನಾಯಿತಿಗಳನ್ನು ನೀಡಿದ್ದು, ಇದರಿಂದಾಗಿ ಸಾರ್ವಜನಿಕರ ಸಂಚಾರದ ಜೊತೆಗೆ ಆರ್ಥಿಕ ಚಟುವಟಿಕೆಗಳೂ ಆರಂಭವಾಗಿವೆ. ಆದರೆ ಲಾಕ್ಡೌನ್ ಅಂತ್ಯಗೊಳ್ಳುವ ಮೊದಲೇ ಸಡಿಲಿಕೆ ಮಾಡಿರುವುದಕ್ಕೆ ಅಪಸ್ವರ ಕೇಳಿಬರುತ್ತಿದೆ.
ಲಾಕ್ ಡೌನ್ ಕಟ್ಟುನಿಟ್ಟಾಗಿ ಅನುಷ್ಠಾನಗೊಂಡಿದ್ದ ಸಂದರ್ಭದಲ್ಲೇ ಇದನ್ನು ಲೆಕ್ಕಿಸದೆ ಹಲವರು ಅಡ್ಡಾಡುತ್ತಿದ್ದರು. ಅಲ್ಲದೆ ಸಾರ್ವಜನಿಕ ಅಂತರ ಕಾಪಾಡಿಕೊಳ್ಳದೆ ಜೊತೆಗೆ ಮಾಸ್ಕ್ ಧರಿಸದೆ ಇವರುಗಳು ಅಡ್ಡಾಡುತ್ತಿದ್ದ ಕಾರಣ ಇತರೆಯವರಿಗೂ ಆತಂಕ ಎದುರಾಗಿತ್ತು. ಇದೀಗ ಲಾಕ್ ಡೌನ್ ಸಡಿಲಿಕೆ ಆಗಿರುವುದರಿಂದ ಜನಜೀವನ ಎಂದಿನಂತೆ ಆರಂಭವಾಗಿದೆ.
ಇದರಿಂದಾಗಿ ಕರೋನಾ ವೈರಸ್ ವ್ಯಾಪಕವಾಗಬಹುದೆಂಬ ಭೀತಿಯೂ ಎದುರಾಗಿದೆ. ಕೆಲವರು ಕರೋನಾ ಸೋಂಕಿಗೆ ಒಳಗಾಗಿದ್ದರೂ ಕೂಡಾ ಅವರುಗಳು ರೋಗದ ಲಕ್ಷಣ ಹೊಂದಿರುವುದಿಲ್ಲವೆನ್ನಲಾಗಿದೆ. ಇಂಥವರು ಸಾರ್ವಜನಿಕರ ನಡುವೆ ಅಡ್ಡಾಡಿದರೆ ಅವರ ಮೂಲಕ ಮತ್ತಷ್ಟು ಜನಕ್ಕೆ ಹರಡಲಿದೆ. ಈ ಕಾರಣದಿಂದಾಗಿಯೇ ಕೆಲ ಸಚಿವರುಗಳು ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಲಾಕ್ ಡೌನ್ ಸಡಿಲಿಕೆ ಕುರಿತು ಅಪಸ್ವರ ಕೇಳಿಬರುತ್ತಿದ್ದು, ಒಮ್ಮೆಲೇ ಇಷ್ಟೊಂದು ಸ್ವಾತಂತ್ರ್ಯ ನೀಡುವ ಬದಲು ಹಂತ ಹಂತವಾಗಿ ಲಾಕ್ ಡೌನ್ ಸಡಿಲಿಕೆ ಮಾಡಬೇಕಾಗಿತ್ತೆಂಬ ಅಭಿಪ್ರಾಯ ಕೇಳಿ ಬರುತ್ತಿದೆ.