ಕರೋನಾ ವೈರಸ್ ಕಾರಣಕ್ಕೆ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು, ಇದು ಜನಜೀವನದ ಮೇಲೆ ಮಾತ್ರವಲ್ಲದೆ ಆರ್ಥಿಕ ಪರಿಸ್ಥಿತಿಯ ಮೇಲೂ ತೀವ್ರ ಪರಿಣಾಮ ಬೀರಿದೆ. ಬಹುತೇಕ ಎಲ್ಲ ಕ್ಷೇತ್ರಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಇದಕ್ಕೆ ದೇಶದ ಅತಿ ಸಿರಿವಂತ ದೇವಾಲಯ ತಿರುಪತಿ ತಿಮ್ಮಪ್ಪನೂ ಹೊರತಾಗಿಲ್ಲ.
ಕೇಂದ್ರ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದ ಬಳಿಕ ಮಾರ್ಚ್ 20ರಿಂದ ತಿರುಪತಿ ತಿರುಮಲ ದೇವಾಲಯ ಮುಚ್ಚಿದ್ದು, ಗುತ್ತಿಗೆ ಕಾರ್ಮಿಕರಿಗೆ ಅಂದಿನಿಂದಲೂ ರಜೆ ನೀಡಲಾಗಿತ್ತು. ಏಪ್ರಿಲ್ 30ಕ್ಕೆ ಈ ಸ್ವಚ್ಛತಾ ಕಾರ್ಮಿಕರ ಗುತ್ತಿಗೆ ಅವಧಿ ಮುಗಿದಿದ್ದು, ಇದನ್ನು ನವೀಕರಿಸಲು ದೇವಾಲಯದ ಆಡಳಿತ ಮಂಡಳಿ ನಿರಾಕರಿಸಿದೆ.
ಇದರ ಪರಿಣಾಮ ದೇವಾಲಯದ 1,300 ಸ್ವಚ್ಛತಾ ಕಾರ್ಮಿಕರು ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ದೇವಾಲಯದ ಆಡಳಿತ ಮಂಡಳಿ ತಮ್ಮನ್ನು ಕೈ ಬಿಟ್ಟಿರುವುದರಿಂದ ಸ್ವಚ್ಛತಾ ಕಾರ್ಮಿಕರು ಆತಂಕಗೊಂಡಿದ್ದಾರೆ. ಗುತ್ತಿಗೆಯನ್ನು ಮುಂದುವರಿಸುವಂತೆ ಮನವಿ ಮಾಡಲಾಗಿದ್ದು, ಇದಕ್ಕೆ ದೇವಾಲಯದ ಆಡಳಿತ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.