ಕೊರೊನಾ ವೈರಸ್ ಇಡೀ ಪ್ರಪಂಚವನ್ನೇ ಬಿಟ್ಟು ಬಿಡದೇ ಕಾಡುತ್ತಿದೆ. ಒಂದಿಷ್ಟು ದೇಶಗಳನ್ನು ಹೊರತುಪಡಿಸಿದರೆ ಬಹುತೇಕ ದೇಶಗಳು ಕೊರೊನಾದಿಂದ ಕಷ್ಟಪಡುತ್ತಿವೆ. ಕೊರೊನಾ ಹಿನ್ನೆಲೆಯಲ್ಲಿ ಲಾಕ್ಡೌನ್ ಮಾಡಲಾಗಿದ್ದು, ಜನ, ಸರ್ಕಾರ ಪರದಾಡುವಂತಾಗಿದೆ. ಇತ್ತ ಮೂರನೇ ಹಂತದ ಲಾಕ್ಡೌನ್ನಲ್ಲಿ ಬಹುತೇಕ ವಿನಾಯ್ತಿಯನ್ನು ಜನರಿಗೆ ನೀಡಲಾಗಿದೆ. ಈ ಬೆನ್ನಲ್ಲೇ ಇದೀಗ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ.
ಲಾಕ್ಡೌನ್ ಸಡಿಲ ಮಾಡಿದಾಗಿನಿಂದಲೂ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಮೊದಲು ವರದಿಯಾಗುತ್ತಿದ್ದ ಪ್ರಕರಣಗಳಿಗೆ ಹೋಲಿಸಿಕೊಂಡರೆ ಇತ್ತೀಚಿನ ವರದಿಗಳಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗಿದೆ. ಆದರೆ ಸರ್ಕಾರ ಮಾತ್ರ ನಾವೆಲ್ಲಾ ವೈರಾಣು ವಿರುದ್ಧ ಹೋರಾಡುತ್ತಲೇ ಜೀವನ ಮಾಡಬೇಕು, ವೈರಸ್ ಜೊತೆಗೆ ಬದುಕುವುದನ್ನು ಕಲಿಯಬೇಕು ಎಂದು ಹೇಳುತ್ತಿದೆ.
ಈ ಮಾತನ್ನು ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ನಮ್ಮ ಮುಂದೆ ದೊಡ್ಡ ಸವಾಲು ಇದೆ. ನಾವೆಲ್ಲರೂ ವೈರಸ್ ಜೊತೆಗೆ ಬದುಕಬೇಕಾದ ಪರಿಸ್ಥಿತಿ ಇದೆ ಎಂದು ಹೇಳಿದ್ದಾರೆ. ಹೀಗಾಗಿ ಮೇ 17 ರ ನಂತರ ಲಾಕ್ಡೌನ್ ಇರುವುದಿಲ್ಲವಾ ಎಂಬ ಅನುಮಾನ ಪ್ರಾರಂಭವಾಗಿದೆ.
ದೇಶದ ಆರ್ಥಿಕ ಸ್ಥಿತಿ ಕಾಪಾಡಲು ಅನಿವಾರ್ಯವಾಗಿ ಈ ನಿರ್ಧಾರಕ್ಕೆ ಕೇಂದ್ರ ಬರಲಿದೆ ಎಂದು ಹೇಳಲಾಗುತ್ತಿದೆ. ಮೇ 17ರ ನಂತರ ಹೊಸ ಮಾರ್ಗಸೂಚಿ ನೀಡುವ ಹಾಗೂ ಲಾಕ್ಡೌನ್ ಕೊನೆಗೊಳಿಸುವ ಸುಳಿವನ್ನು ಕೇಂದ್ರ ನೀಡಿದೆ ಎನ್ನಲಾಗುತ್ತಿದೆ.