ಪಡಿತರ ಚೀಟಿ ಹೊಂದಿರುವವರಿಗೆ ಬಹುಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ಪಡಿತರ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುವ ನ್ಯಾಯಬೆಲೆ ಅಂಗಡಿಗಳ ಪರವಾನಿಗೆ ರದ್ದುಗೊಳಿಸುವುದರ ಜೊತೆಗೆ ಈ ಅಕ್ಕಿಯನ್ನು ಮಾರಿಕೊಳ್ಳುವ ಗ್ರಾಹಕರ ಪಡಿತರ ಚೀಟಿ ರದ್ದುಪಡಿಸುವ ಕುರಿತಾಗಿ ಹೊಸ ಕಾನೂನು ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಪಡಿತರ ಚೀಟಿದಾರರು ತಾವು ಪಡೆದ ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಮಾರಿಕೊಳ್ಳುತ್ತಿರುವ ಅನೇಕ ಪ್ರಕರಣಗಳು ರಾಜ್ಯದಲ್ಲಿ ಕಂಡು ಬಂದಿವೆ. ಅಲ್ಲದೆ ಕೆಲವೊಂದು ಕಡೆ ನ್ಯಾಯಬೆಲೆ ಅಂಗಡಿಯವರೊಂದಿಗೆ ಶಾಮೀಲಾಗಿ ಈ ಕಾರ್ಯ ನಡೆಸಲಾಗುತ್ತಿದೆ. ಹೀಗಾಗಿ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಬಡವರ ಹಸಿವನ್ನು ನೀಗಿಸಲು ವಿತರಿಸುವ ಅಕ್ಕಿಯನ್ನು ಕೆಲ ನ್ಯಾಯಬೆಲೆ ಅಂಗಡಿ ಮಾಲೀಕರು ಹಾಗೂ ಪಡಿತರ ಪಡೆದವರು ಈ ರೀತಿ ಕಾಳಸಂತೆಯಲ್ಲಿ ಮಾರಾಟ ಮಾಡಿಕೊಳ್ಳುತ್ತಿರುವುದು ಅಕ್ಷಮ್ಯವಾಗಿದ್ದು, ಕಾನೂನು ಜಾರಿಗೆ ಬಂದರೆ ನ್ಯಾಯಬೆಲೆ ಅಂಗಡಿ ಪರವಾನಿಗೆ ರದ್ದುಗೊಳ್ಳುತ್ತಲ್ಲದೆ ಅಂತಹ ಪಡಿತರದಾರರ ಪಡಿತರ ಚೀಟಿ ಕೂಡ ರದ್ದಾಗುತ್ತದೆ.