ನವದೆಹಲಿ: ಬುದ್ಧ ಪೂರ್ಣಿಮೆ ಅಂಗವಾಗಿ ಪ್ರಧಾನಿ ಮೋದಿ ಇಂದು ದೇಶದ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದು ಸಮಯದ ಜೊತೆಗೆ ನಾವು ಬದಲಾಗಬೇಕಿದೆ ಎಂದು ಹೇಳಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ನಲ್ಲಿ ಅವರು ಮಾತನಾಡಿ, ವಿಶ್ವ ಈಗ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ನಿಮ್ಮನ್ನು ಭೇಟಿಯಾಗುವುದಕ್ಕೆ ಪರಿಸ್ಥಿತಿ ಅವಕಾಶ ನೀಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಬುದ್ಧನ ವಿಚಾರಗಳು ಪ್ರಸ್ತುತವಾಗಿವೆ. ಮಾನವೀಯತೆಯಿಂದ ಬುದ್ಧನ ಅನುಯಾಯಿಗಳ ಸೇವೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಭಗವಾನ್ ಬುದ್ಧನ ನಿಜವಾದ ಅನುಯಾಯಿಗಳು ಎಂದರೆ ಸಂಕಷ್ಟದ ಸಂದರ್ಭದಲ್ಲಿ ಸಹಾಯ ಮಾಡುವ ಅಗತ್ಯತೆ ಸೇವೆಯಲ್ಲಿ ತೊಡಗಿರುವವರು. ಪ್ರತಿಯೊಬ್ಬರಿಗೂ ನನ್ನ ನಮನ, ನಿಮ್ಮೊಂದಿಗೆ ನನ್ನ ಅನಿಸಿಕೆ ಹಂಚಿಕೊಳ್ಳುತ್ತಿದ್ದೇನೆ. ಸಂಕಷ್ಟದ ಪರಿಸ್ಥಿತಿಯನ್ನು ಸಂಘಟಿತವಾಗಿ ಎದುರಿಸುತ್ತೇವೆ. ಭಾರತದ ಸಂಸ್ಕೃತಿ ಯಾವಾಗಲೂ ಹೊಸದಿಕ್ಕು ತೋರಿದೆ ಎಂದು ಹೇಳಿದ್ದಾರೆ.
ಬುದ್ಧನ ಸಂದೇಶ ನಮ್ಮ ಜೀವನದಲ್ಲಿ ನಿರಂತರವಾಗಿವೆ. ಬುದ್ಧ ಹೆಸರು ಮಾತ್ರವಲ್ಲ ಪವಿತ್ರ ವಿಚಾರವಾಗಿದೆ. ಮಾನವನ ಮನಸ್ಸಿನಲ್ಲಿ ಬುದ್ಧನ ಸಂದೇಶಗಳು ಇವೆ. ಭಾರತ ವಿಶ್ವಕ್ಕೆ ಮಾರ್ಗದರ್ಶಿಯಾಗಿದೆ. ನಮ್ಮ ಕೆಲಸ ಸೇವಾಮನೋಭಾವದಿಂದ ಇರಬೇಕು. ಬುದ್ಧ ಯಾವುದೋ ಒಂದು ಪರಿಸ್ಥಿತಿಗೆ ಸೀಮಿತವಾಗಿಲ್ಲ. ಸಮಯ, ಸ್ಥಿತಿ, ಸಾಮಾಜಿಕ ವ್ಯವಸ್ಥೆ ಬದಲಾಗಿದೆ. ಆದರೆ ಬುದ್ಧನ ಸಂದೇಶ ನಮ್ಮ ಜೀವನದಲ್ಲಿ ನಿರಂತರವಾಗಿದೆ ಎಂದು ತಿಳಿಸಿದ್ದಾರೆ.