ಕರೋನಾ ವೈರಸ್ ಜನ ಜೀವನವನ್ನು ಕಂಗೆಡುವಂತೆ ಮಾಡಿದೆ. ಇದರ ಬಿಸಿ ಜನರಿಗೆ ಮಾತ್ರವಲ್ಲ ದೇವಾಲಯಗಳಿಗೂ ತಟ್ಟಿದೆ. ಲಾಕ್ ಡೌನ್ ನಿಂದಾಗಿ ದೇಶದ ಎಲ್ಲ ದೇವಾಲಯಗಳು ಮುಚ್ಚಿದ್ದು, ಹೀಗಾಗಿ ಆದಾಯವಿಲ್ಲದಂತಾಗಿದೆ.
ಮಹಾರಾಷ್ಟ್ರದ ಶಿರಡಿಯಲ್ಲಿರುವ ಶಿರಡಿ ಸಾಯಿಬಾಬಾ ಮಂದಿರವು ಕೂಡಾ ಭಾರಿ ನಷ್ಟ ಅನುಭವಿಸಿದ್ದು, ದಿನವೊಂದಕ್ಕೆ 1.58 ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎನ್ನಲಾಗಿದೆ. ಮಾರ್ಚ್ 17ರಿಂದ ಮೇ 3 ರ ವರೆಗೆ ಮಂದಿರ ಮುಚ್ಚಿದ್ದ ಅವಧಿಯಲ್ಲಿ ಟ್ರಸ್ಟ್ ಗೆ ಕೇವಲ 2.53 ಕೋಟಿ ರೂಪಾಯಿ ದೇಣಿಗೆ ಬಂದಿದೆ ಎಂದು ಹೇಳಲಾಗಿದೆ.
ಶಿರಡಿ ಸಾಯಿಬಾಬಾ ಮಂದಿರಕ್ಕೆ ಸಾಮಾನ್ಯ ಸಂದರ್ಭಗಳಲ್ಲಿ ವರ್ಷಕ್ಕೆ 600 ಕೋಟಿ ರೂಪಾಯಿ ಆದಾಯ ಬರುತ್ತಿದ್ದು, ಇದು ದಿನವೊಂದಕ್ಕೆ 1.68 ಕೋಟಿ ರೂಪಾಯಿ ಆಗುತ್ತದೆ. ಇದೀಗ ಲಾಕ್ ಡೌನ್ ಅವಧಿಯಲ್ಲಿ ಕೇವಲ 2.53 ಕೋಟಿ ರೂಪಾಯಿ ಬಂದಿರುವುದರಿಂದ ದಿನವೊಂದಕ್ಕೆ ಆರು ಲಕ್ಷ ರೂಪಾಯಿ ಸಂಗ್ರಹವಾದಂತಾಗಿದೆ.