ಲಾಕ್ಡೌನ್ನಿಂದಾಗಿ ಜನ ನಲುಗಿ ಹೋಗಿದ್ದಾರೆ. ಯಾವಾಗ ಕೊರೊನಾದಿಂದ ಮುಕ್ತಿ ಹೊಂದುತ್ತೇವೆ ಎಂದು ಕಾಯುತ್ತಿದ್ದಾರೆ. ಇತ್ತ ವಲಸೆ ಕಾರ್ಮಿಕರಂತೂ ಇಲ್ಲಿ ಇರಲಾರದೆ, ತಮ್ಮೂರುಗಳಿಗೆ ಹೋಗಲಾಗದೆ ಪರದಾಡುವಂತಾಗಿದೆ.
ಈಗಾಗಲೇ ಕೇಂದ್ರ ಸರ್ಕಾರ ಒಂದಿಷ್ಟು ರಾಜ್ಯಗಳಿಗೆ ರೈಲು ಸೇವೆ ನೀಡಿದೆ. ಆದರೆ ಮತ್ತೊಂದಿಷ್ಟು ರಾಜ್ಯಗಳಿಗೆ ಸೇವೆ ಒದಗಿಸಿಲ್ಲ. ಹೀಗಾಗಿ ಅನೇಕ ಮಂದಿ ತಾವು ಕೆಲಸ ಮಾಡುತ್ತಿದ್ದ ರಾಜ್ಯಗಳಿಂದ ತಮ್ಮ ತವರು ರಾಜ್ಯಕ್ಕೆ ಕಾಲ್ನಡಿಗೆಯಲ್ಲಿಯೇ ಹೋಗುತ್ತಿದ್ದಾರೆ.
ಹೀಗೆ ಹೋಗುತ್ತಿದ್ದವರು ನಡೆದು ನಡೆದು ಸುಸ್ತಾಗಿ ಸಾವನ್ನಪ್ಪಿರುವ ಘಟನೆಗಳು ಕೂಡ ದೇಶದಲ್ಲಿ ನಡೆದಿವೆ. ಇದೀಗ ಈ ಘಟನೆಗಳ ಸಾಲಿಗೆ ಮತ್ತೊಂದು ಸಾವು ಸೇರ್ಪಡೆಯಾಗಿದೆ.
ಹೌದು, ಹೈದ್ರಾಬಾದ್ನಿಂದ ಒಡಿಶಾದ ಮಲ್ಕಂಗಿರಿಗೆ ಹೊರಟಿದ್ದ ಕಾರ್ಮಿಕನೊಬ್ಬ ಎದೆ ನೋವು ಕಾಣಿಸಿಕೊಂಡು ಸಾವನ್ನಪ್ಪಿದ್ದಾರೆ. 21 ವರ್ಷದ ವಲಸೆ ಕಾರ್ಮಿಕ, ಭದ್ರಾಚಲಂಗೆ ತಲುಪಿದಾಗ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.
ಇನ್ನು ಬಿಸಿಲಿನ ಬೇಗೆ ಹೆಚ್ಚಿದ್ದರಿಂದ ಸಾವನ್ನಪ್ಪಿರಬಹುದು ಎಂದು ವೈದ್ಯರು ಅನುಮಾನ ಪಟ್ಟಿದ್ದಾರೆ. ಆದರೆ ಸೋಮವಾರದಿಂದ ಈತ ಹಾಗೂ ಈ ಯುವಕನ ಸ್ನೇಹಿತರು ಊಟ ಮಾಡಿರಲಿಲ್ಲ ಎಂದು ಹೇಳಲಾಗುತ್ತಿದೆ. ಒಟ್ನಲ್ಲಿ ತನ್ನೂರನ್ನು ನೋಡುವ ಮುನ್ನವೇ ಯುವಕ ಸಾವನ್ನಪ್ಪಿರುವುದು ದುರಾದೃಷ್ಟಕರ ಸಂಗತಿ.