ದೆಹಲಿಯಲ್ಲಿ ಶ್ರದ್ಧಾ ವಾಕರ್ ಹತ್ಯೆಯಂತೆಯೇ ಹೈದರಾಬಾದ್ ನಲ್ಲಿ ಮತ್ತೊಂದು ಹಾರರ್ ಘಟನೆ ನಡೆದಿದೆ. ಮಹಿಳೆಯನ್ನ ಕೊಂದು ತುಂಡು ತುಂಡಾಗಿ ಕತ್ತರಿಸಿದ ವ್ಯಕ್ತಿ ದೇಹದ ಭಾಗಗಳನ್ನು ಫ್ರಿಡ್ಜ್ ಮತ್ತು ಸೂಟ್ ಕೇಸ್ ನಲ್ಲಿಟ್ಟಿದ್ದ ಬೆಚ್ಚಿಬೀಳಿಸುವ ಘಟನೆ ಬಯಲಾಗಿದೆ. ಪ್ರಕರಣದಲ್ಲಿ ಆರೋಪಿ ಪಿ. ಚಂದ್ರ ಮೋಹನ್ (48) ನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಚಂದ್ರ ಮೋಹನ್, 55 ವರ್ಷದ ಅನುರಾಧಾ ರೆಡ್ಡಿಯನ್ನು ಚಾಕುವಿನಿಂದ ಇರಿದು ಕೊಂದಿದ್ದ. ನಂತರ ಆಕೆಯ ದೇಹವನ್ನು ವಿಲೇವಾರಿ ಮಾಡಲು ಹಲವಾರು ತುಂಡುಗಳಾಗಿ ಕತ್ತರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 17 ರಂದು, ಅಫ್ಜಲ್ ನಗರದ ಸಮುದಾಯ ಭವನದ ಎದುರು ಮೂಸಿ ನದಿಯ ಸಮೀಪ ಕಸ ಎಸೆಯುವ ಸ್ಥಳದಲ್ಲಿ, ಕಪ್ಪು ಕವರ್ನಲ್ಲಿ ಅಪರಿಚಿತ ಮಹಿಳೆಯ ತಲೆ ಪತ್ತೆಯಾಗಿದೆ ಎಂದು ಪೊಲೀಸರು ದೂರು ಸ್ವೀಕರಿಸಿದ ಬಳಿಕ ತನಿಖೆಯಲ್ಲಿ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ.
ಪ್ರಕರಣದ ತನಿಖೆಗಾಗಿ ಪೊಲೀಸರು ಒಟ್ಟು ಎಂಟು ತಂಡಗಳನ್ನು ರಚಿಸಿದ್ದರು. ಒಂದು ವಾರದಲ್ಲಿ ಪ್ರಕರಣವನ್ನು ವಿಶ್ಲೇಷಿಸಿದ ನಂತರ ಆರೋಪಿ ಚಂದ್ರಮೋಹನ್ ಸಿಕ್ಕಿಬಿದ್ದಿದ್ದ. ಆರೋಪಿಯ ವಿಚಾರಣೆಯ ನಂತರ ಮೃತಳನ್ನು ಅನುರಾಧಾ ರೆಡ್ಡಿ ಎಂದು ಗುರುತಿಸಲಾಗಿದೆ. ಆರೋಪಿಯು ಮೃತಳೊಂದಿಗೆ ಸಂಬಂಧವನ್ನು ಹೊಂದಿದ್ದನು.
ಹಾಗಾಗಿ ಅವರನ್ನ ಆರೋಪಿಯು ತನ್ನ ಮನೆಯ ಒಂದು ಭಾಗವಾದ ನೆಲಮಹಡಿಯಲ್ಲಿರಿಸಿದ್ದರು. 2018 ರಿಂದ ಆರೋಪಿ ಮಹಿಳೆಯಿಂದ ಸುಮಾರು 7 ಲಕ್ಷ ರೂಪಾಯಿ ಪಡೆದಿದ್ದ. ಹಣ ಹಿಂದಿರುಗಿಸುವಂತೆ ಮಹಿಳೆ ಪದೇ ಪದೇ ಪ್ರಶ್ನಿಸುತ್ತಿದ್ದಳು. ಇದರಿಂದಾಗಿ ಆರೋಪಿಯು ಜುಗುಪ್ಸೆ ಹೊಂದಿ ಆಕೆಯನ್ನು ಸಂಪೂರ್ಣವಾಗಿ ತೊರೆಯಲು ನಿರ್ಧರಿಸಿದನು.
ಆರೋಪಿ ಮೇ 12 ರಂದು ಮೊದಲೇ ಯೋಜಿಸಿದಂತೆ ಮಹಿಳೆಯನ್ನು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಯೋಜನೆಯಂತೆ ಮೇ 12ರಂದು ಮಧ್ಯಾಹ್ನ ಆರೋಪಿಯು ಮೃತಳೊಂದಿಗೆ ಹಣ ಕೊಡುವ ವಿಚಾರದಲ್ಲಿ ಜಗಳ ತೆಗೆದು ಚಾಕುವಿನಿಂದ ಹಲ್ಲೆ ನಡೆಸಿ ಆಕೆಯ ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಇರಿದಿದ್ದಾನೆ. ಇದರಿಂದಾಗಿ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ನಂತರ ಆರೋಪಿಯು ದೇಹವನ್ನು ವಿಲೇವಾರಿ ಮಾಡಲು ಕಲ್ಲು ಕತ್ತರಿಸುವ 2 ಸಣ್ಣ ಯಂತ್ರಗಳನ್ನು ಖರೀದಿಸಿದ್ದ. ಅದರ ನಂತರ ತಲೆಯನ್ನು ಕತ್ತರಿಸಿ ಕಪ್ಪು ಪಾಲಿಥಿನ್ ಕವರ್ನಲ್ಲಿ ಇರಿಸಿದ್ದ. ಕಾಲುಗಳು ಮತ್ತು ಕೈಗಳನ್ನು ಕತ್ತರಿಸಿ ಫ್ರಿಜ್ನಲ್ಲಿಟ್ಟಿದ್ದ. ಅವುಗಳನ್ನು ಸೂಟ್ ಕೇಸ್ ನಲ್ಲಿ ವಿಲೇವಾರಿ ಮಾಡಲು ಪ್ಲಾನ್ ಮಾಡಿದ್ದ.
ಮೇ 15ರಂದು ಆರೋಪಿ ಮೃತಳ ಕಡಿದ ತಲೆಯನ್ನು ತಂದು ಕಸ ಬಿಸಾಡುವ ಜಾಗದಲ್ಲಿ ಎಸೆದು ಹೋಗಿದ್ದ. ಬಳಿಕ ಫಿನೈಲ್, ಡೆಟಾಲ್, ಪರ್ಫ್ಯೂಮ್ ಅಗರಬತ್ತಿ, ಕರ್ಪೂರ ಹಾಗೂ ಸುಗಂಧ ದ್ರವ್ಯ ಸ್ಪ್ರೇ ಬಾಟಲಿಗಳನ್ನು ತಂದು ಆಸುಪಾಸಿನಲ್ಲಿ ದುರ್ವಾಸನೆ ಹರಡದಂತೆ ದೇಹಕ್ಕೆ ನಿತ್ಯ ಹಚ್ಚುತ್ತಿದ್ದ. ಬಳಿಕ ಮೃತಳ ಸೆಲ್ ಫೋನ್ ತೆಗೆದುಕೊಂಡು ಆಕೆಯ ಪರಿಚಿತ ವ್ಯಕ್ತಿಗಳಿಗೆ ಸಂದೇಶ ಕಳಿಸಿ ಆಕೆ ಬದುಕಿದ್ದು ಎಲ್ಲೋ ಇದ್ದಾಳೆ ಎಂದು ನಂಬಿಸಿದ್ದ. ಇದೀಗ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ದೆಹಲಿಯಲ್ಲಿ ಇದೇ ರೀತಿಯ ಘಟನೆಯಲ್ಲಿ ಮೃತ ಶ್ರದ್ಧಾ ವಾಕರ್ ಅವರನ್ನು ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ಕೊಲೆ ಮಾಡಿ ನಂತರ 35 ತುಂಡುಗಳಾಗಿ ಕತ್ತರಿಸಿದ್ದ.