ಉದ್ಯಮಿ ಗೋವಿಂದ ಬಾಬು ಪೂಜಾರಿಯವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ 5 ಕೋಟಿ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಹಿಂದುತ್ವ ಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಸೇರಿದಂತೆ ಏಳು ಮಂದಿಯನ್ನು ಸಿಸಿಬಿ ಪೊಲೀಸರು ಈವರೆಗೂ ಬಂಧಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣದಲ್ಲಿ ಅಭಿನವ ಹಾಲಶ್ರೀ ಸ್ವಾಮೀಜಿಯೂ ಓರ್ವ ಆರೋಪಿಯಾಗಿದ್ದು, ತಲೆಮರೆಸಿಕೊಂಡಿರುವ ಅವರು ಸಿಕ್ಕಿಬಿದ್ದರೆ ದೊಡ್ಡವರು ಹೆಸರು ಬಹಿರಂಗವಾಗುತ್ತದೆ ಎಂದು ಹೇಳುವ ಮೂಲಕ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಕುತೂಹಲ ಮೂಡಿಸಿದ್ದಾರೆ. ಇದರ ಮಧ್ಯೆ ಪ್ರಕರಣದ ಕುರಿತಂತೆ ಇಂಟರೆಸ್ಟಿಂಗ್ ವಿಷಯಗಳು ಒಂದೊಂದಾಗಿ ಬಯಲಾಗುತ್ತಿವೆ.
ಈ ಪ್ರಕರಣದಲ್ಲಿ ಐದನೇ ಆರೋಪಿಯಾಗಿರುವ ಚನ್ನಾನಾಯ್ಕ ಎಂಬಾತನನ್ನು ಪೊಲೀಸರು ಗುರುವಾರದಂದು ಬಂಧಿಸಿದ್ದು, ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸದಸ್ಯನಂತೆ ನಟಿಸಿದ್ದ ಈತನಿಗೆ ಉತ್ತರ ಭಾರತದವರಂತೆ ಹಿಂದಿ ಮಾತನಾಡಲು ಬರುತ್ತದೆ ಎಂಬ ಕಾರಣಕ್ಕೆ ಒಂದು ಲಕ್ಷ ರೂಪಾಯಿಗಳನ್ನು ನೀಡಲಾಗಿತ್ತಂತೆ.
ಮೂಲತಃ ವಿಜಯನಗರ ಜಿಲ್ಲೆ, ಹರಪನಹಳ್ಳಿ ತಾಲೂಕಿನ ಮಾಚಿಹಳ್ಳಿ ತಾಂಡಾ ನಿವಾಸಿಯಾಗಿರುವ ಚನ್ನನಾಯ್ಕ ಕೃಷಿಕನಾಗಿದ್ದು, ಏಳು ಭಾಷೆಗಳನ್ನು ಬಲ್ಲವನಾಗಿದ್ದ. ಈತನನ್ನು ಕಡೂರಿನಲ್ಲಿ ಭೇಟಿಯಾಗಿದ್ದ ಚೈತ್ರಾ ಕುಂದಾಪುರ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಗೆ ಟಿಕೆಟ್ ಸಿಗುವುದಿಲ್ಲ, ಆ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ. ನಿಮಗೆ ಮುಂದಿನ ದಿನಗಳಲ್ಲಿ ಅನುಕೂಲವಾಗಲಿದೆ ಎಂದು ಹೇಳಿದ್ದಲ್ಲದೆ ನಾನು ಹೇಳಿದಂತೆ ಹಿಂದಿಯಲ್ಲಿ ಮಾತನಾಡಿ ಗೋವಿಂದ ಬಾಬು ಪೂಜಾರಿಯವರನ್ನು ನಂಬಿಸುವಂತೆ ಸೂಚಿಸಿದ್ದಳಂತೆ. ಅದರಂತೆ ಮಾತನಾಡಿದ್ದ ಚನ್ನನಾಯ್ಕಗೆ ಒಂದು ಲಕ್ಷ ರೂಪಾಯಿಗಳನ್ನು ನೀಡಲಾಗಿದ್ದು, ಇದೀಗ ಸಿಕ್ಕಿ ಬಿದ್ದಿದ್ದಾನೆ.