ಹಾಸನ: ಮಾಜಿ ಸಚಿವ ಹೆಚ್.ಡಿ ರೇವಣ್ಣ ಆಪ್ತ, ಗ್ರ್ಯಾನೈಟ್ ಉದ್ಯಮಿ ಕೃಷ್ಣೇಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಬರೋಬ್ಬರಿ 143 ಆರೊಪಿಗಳನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ.
ಉದ್ಯಮಿ ಹತ್ಯೆಗೆ ಸಂಬಂಧಿಸಿದಂತೆ ಆರಂಭದಲ್ಲಿ 7 ಜನ ಸುಪಾರಿ ಕಿಲ್ಲರ್ ಗಳನ್ನು ಬಂಧಿಸಲಾಗಿತ್ತು. ಹತ್ಯೆಗೆ ಸುಪಾರಿ ನೀಡಿದ್ದ ಯೋಗಾನಂದ್, ಹತ್ಯೆಗೈದಿದ್ದ ಧನಾಂಜಯ್ (21), ಹಾಸನ ಆಟೋ ಚಾಲಕ ಗುಡ್ಡೇನಹಳ್ಳಿಯ ಚಂದನ (20), ಗೂರನಹಳ್ಳಿ ಗ್ರಾಮದ ಚೇತನ್ (22), ಬಾಗೂರು ಗ್ರಾಮದ ಪ್ರದೀಪ್ (27), ಮಣಿಕಂಠ (27) ಸೇರಿದಂತೆ 7 ಜನರನ್ನು ಹಾಸನ ಪೊಲೀಸರು ಬಂಧಿಸಿದ್ದರು. ಇದೀಗ ಬಂಧಿತ ಆರೋಪಿಗಳ ಸಂಖ್ಯೆ 143ಕ್ಕೆ ಏರಿಕೆಯಾಗಿದೆ.
ಆಗಸ್ಟ್ 9ರಂದು ಹಾಸನ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಉದ್ಯಮಿ ಕೃಷ್ಣೇಗೌಡ ಶವ ಪತ್ತೆಯಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ, ಉದ್ಯಮಿಯ ಕಾರನ್ನು ಅಡ್ಡಗಟ್ಟಿ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚರಣೆ ನಡೆಸಿದ್ದಾರೆ. ಹಣಕಾಸಿನ ವಿಚಾರವಾಗಿ ಕೊಲೆ ನಡೆದಿದೆ ಎಂದು ತಿಳಿದುಬಂದಿದೆ.