ಬೆಂಗಳೂರು : ಸದಾ ಒಂದಲ್ಲೊಂದು ವಿವಾದಗಳ ಮೂಲಕ ಸುದ್ದಿಯಾಗುವ ನಟ ಚೇತನ್ ಅಹಿಂಸಾ ಇದೀಗ ಸ್ಟಾರ್ ನಟರ ಸ್ಮಾರಕ ನಿರ್ಮಾಣದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಸಿನಿಮಾ ಸ್ಟಾರ್ ಗಳ ಸ್ಮಾರಕಕ್ಕೆ ಸರ್ಕಾರದ ಹಣ, ಜಾಗ ಬಳಸಬಾರದು ಎಂದು ನಟ ಚೇತನ್ ಅಹಿಂಸಾ ಪೋಸ್ಟ್ ಹಂಚಿಕೊಂಡಿದ್ದಾರೆ.
ಚೇತನ್ ಹೇಳಿದ್ದೇನು..?
” ಸೂಪರ್ ಸ್ಟಾರ್ ವಿಷ್ಣುವರ್ಧನ್ ಅವರ ಬೆಂಗಳೂರಿನ ಸಮಾಧಿ ಸ್ಥಳದಲ್ಲಿ ಅಭಿಮಾನಿಗಳ-ಪ್ರಾಯೋಜಿತ ಸ್ಮಾರಕಕ್ಕೆ ಸಂಬಂಧಿಸಿದ ಜಮೀನು ಸಮಸ್ಯೆಯನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನವು ಸಮಂಜಸವಾಗಿದೆ. ಆದಾಗ್ಯೂ, ಎರಡು ಕಾರಣಗಳಿಗಾಗಿ ಸ್ಮಾರಕಕ್ಕಾಗಿ ಯಾವುದೇ ತೆರಿಗೆದಾರರ ನಿಧಿಗಳು ಅಥವಾ ಸರ್ಕಾರಿ ಭೂಮಿಯನ್ನು ಒದಗಿಸಬಾರದು: 1. 5 ಎಕರೆ, 11 ಕೋಟಿ ರೂಪಾಯಿಗಳ ಸರ್ಕಾರಿ-ಪ್ರಾಯೋಜಿತ ಸ್ಮಾರಕವನ್ನು ಈಗಾಗಲೇ ಮೈಸೂರಿನಲ್ಲಿ ಮಾಡಲಾಗಿದೆ. 2. ಚಲನಚಿತ್ರ ತಾರೆಯರ ಸ್ಮಾರಕಗಳಿಗೆ ಸರ್ಕಾರ ತೆರಿಗೆದಾರರ ನಿಧಿಯನ್ನು ಮಂಜೂರು ಮಾಡಬಾರದು” ಎಂದು ಸೋಶಿಯಲ್ ಮೀಡಿಯಾದಲ್ಲಿ ನಟ ಚೇತನ್ ಅಹಿಂಸಾ ಪೋಸ್ಟ್ ಹಂಚಿಕೊಂಡಿದ್ದಾರೆ.
ಸಾಹಸಸಿಂಹ , ನಟ ವಿಷ್ಣುವರ್ಧನ್ ಅಭಿಮಾನಿಗಳನ್ನು ಅಗಲಿ ಡಿಸೆಂಬರ್ 30ಕ್ಕೆ 14 ವರ್ಷ ತುಂಬಲಿದೆ. ಇದರ ನಡುವೆ ಬೆಂಗಳೂರಿನಲ್ಲಿ ಡಾ.ವಿಷ್ಣುವರ್ಧನ್ ಅವರ ಪುಣ್ಯಭೂಮಿ ನಿರ್ಮಾಣವಾಗಬೇಕು ಎನ್ನುವ ನಿಟ್ಟಿನಲ್ಲಿ ಹೋರಾಟ ಆರಂಭವಾಗಿದೆ.