alex Certify ಭದ್ರಾವತಿ ಆಕಾಶವಾಣಿ ಕೇಂದ್ರಕ್ಕೆ 10 ಕಿಲೋ ವ್ಯಾಟ್ ಸಿಕ್ಕಿರುವುದು ಮಲೆನಾಡಿಗೆ ಸಿಕ್ಕ ಗೌರವ : ಸಂಸದ ಬಿ.ವೈ ರಾಘವೇಂದ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭದ್ರಾವತಿ ಆಕಾಶವಾಣಿ ಕೇಂದ್ರಕ್ಕೆ 10 ಕಿಲೋ ವ್ಯಾಟ್ ಸಿಕ್ಕಿರುವುದು ಮಲೆನಾಡಿಗೆ ಸಿಕ್ಕ ಗೌರವ : ಸಂಸದ ಬಿ.ವೈ ರಾಘವೇಂದ್ರ

ಶಿವಮೊಗ್ಗ : ಪ್ರಸಾರ ಭಾರತಿ ವತಿಯಿಂದ ಭದ್ರಾವತಿ ಆಕಾಶವಾಣಿಯಲ್ಲಿ 10 ಕಿಲೋ ವ್ಯಾಟ್ ಎಫ್.ಎಂ ಪ್ರಸರಣ ಕೇಂದ್ರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ವರ್ಚುವಲ್ ವಿಡಿಯೋ ಮೂಲಕ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.

ಶಿವಮೊಗ್ಗ ನಗರದ ವಿದ್ಯಾನಗರದಲ್ಲಿರುವ ದೂರದರ್ಶನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಂಸದರಾದ ಬಿ.ವೈ. ರಾಘವೇಂದ್ರ ಅವರು ಮಾತನಾಡಿ, ಶಿವಮೊಗ್ಗ ನಗರದ ಜನತೆಯ ಬಹುದಿನದ ಬೇಡಿಕೆ ಆಗಿದ್ದ ಎಫ್.ಎಂ ಕೇಂದ್ರ 10 ವ್ಯಾಟ್ ನ ಎಫ್.ಎಂ ಕೇಂದ್ರವಾಗಿ ವಿಸ್ತರಣೆ ಹೊಂದಿದೆ ಎಂದರು.

1 ಕಿಲೋ ವ್ಯಾಟ್ ಇದ್ದ ಶಿವಮೊಗ್ಗ ಭದ್ರಾವತಿ ಕೇಂದ್ರಕ್ಕೆ 10 ಕಿಲೋ ವ್ಯಾಟ್ ಸಿಕ್ಕಿರುವುದು ಮಲೆನಾಡಿಗೆ ಸಿಕ್ಕ ಗೌರವ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಪ್ರಸ್ತುತ ಶಿವಮೊಗ್ಗ ಮತ್ತು ಭದ್ರಾವತಿ ವ್ಯಾಪ್ತಿಯಲ್ಲಿ ಆಕಾಶವಾಣಿ ಮತ್ತು ಎಫ್.ಎಂ ರೇಡಿಯೋ ಸುಮಾರು 1 ಕೆವಿ ಸಾಮಥ್ರ್ಯ ಟ್ರಾನ್ಸ್ಮಿಟರ್ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಉನ್ನತೀಕರಣದ ನಂತರ ಇದರ ವ್ಯಾಪ್ತಿ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ,ಉತ್ತರ ಕನ್ನಡ, ಉಡುಪಿ ಸೇರಿದಂತೆ ಅಕ್ಕಪಕ್ಕದ 8 ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲು ಸಹಕಾರಿಯಾಗಲಿದೆ ಎಂದರು.

ರಾಜಧಾನಿ ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿ ಅತ್ಯಧಿಕ ಸಾಮಥ್ರ್ಯದ ಟ್ರಾನ್ಸ್ಮಿಟರ್ ಅಳವಡಿಕೆ ಕಾರ್ಯ ನಮ್ಮ ಶಿವಮೊಗ್ಗದಲ್ಲಿ ಆಗುತ್ತಿರುವುದು ನಮಗೆಲ್ಲ ಹೆಮ್ಮೆ ಹಾಗೂ ಸಂತೋಷ ತರುವ ವಿಚಾರವಾಗಿದೆ ಎಂದರು.

ಆಕಾಶವಾಣಿಗೆ 59 ವರ್ಷ ತುಂಬಿದ್ದು ಇಳಿ ವಯಸ್ಸಿನಲ್ಲಿ ಯೌವನ ಬಂದಿದೆ. ಪ್ರಧಾನಿ ಮೋದಿ ಅವರ ದೂರದೃಷ್ಟಿ ನಾಯಕತ್ವವು ನಮ್ಮ ಮಲೆನಾಡಿನ ಅಭಿವೃದ್ಧಿಗೆ ಸಹಕಾರಿಯಾಗಿದೆ. ಈ ಯೋಜನೆಗೆ ರೂ. 10 ಕೋಟಿ ಅನುದಾನ ನೀಡಲಾಗಿದ್ದು ಅನುದಾನದ ನಂತರ ತುಮಕೂರುವರೆಗೂ ರೆಡಿಯೋ ಸೇವೆ ದೊರೆಯಲಿದೆ. ಮೋಬೈಲ್ ನಲ್ಲೂ ಇಂಟರ್ನೆಟ್ ಇಲ್ಲದೆ ಬಳಸಬಹುದು. ನಮ್ಮ ಮಲೆನಾಡಿನ ಗ್ರಾಮೀಣ ಮಕ್ಕಳ ಪ್ರತಿಭೆ ಅನಾವರಣಕ್ಕೆ ಸಹ ಸಹಕಾರಿ ಆಗಲಿದ್ದು ಮುಂದಿನ ದಿನಗಳಲ್ಲಿ ಭಾರತದಲ್ಲಿ ಅತೀ ದೊಡ್ಡ ಎಫ್ ಎಂ ಕೇಂದ್ರ ಆಗಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.

ಭದ್ರಾವತಿ ಆಕಾಶವಾಣಿ ಸ್ಟುಡಿಯೋವನ್ನು ಮೇಲ್ದರ್ಜೆಗೇರಿಸಲಾಗುವುದು. ಈ ರೀತಿಯ ಯೋಜನೆಯನ್ನು ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಕೇಂದ್ರದ ಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ವಿಧಾನ ಪರಿಷತ್ ಶಾಸಕರಾದ ರುದ್ರೇಗೌಡರು ಮಾತನಾಡಿ, ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳು ಈ ದೇಶದಲ್ಲಿ ಅಧಿಕಾರ ವಹಿಸಿಕೊಂಡ ನಂತರ ದೇಶದ ಅಭಿವೃದ್ಧಿ ಚಿಂತನೆಯೊಂದಿಗೆ ಈ ರೀತಿಯ ಅನೇಕ ಯೋಜನೆಯನ್ನು ನೀಡಿದ್ದಾರೆ. ಸಂಸದ ಬಿ.ವೈ. ರಾಘವೇಂದ್ರ ಅವರು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದಾರೆ ಎಂದರು.

ಭದ್ರಾವತಿ ಆಕಾಶವಾಣಿ ಕೇಂದ್ರದ ಮುಖ್ಯಸ್ಥರಾದ ಎಸ್ ಆರ್ ಭಟ್ ಅವರು ಮಾತನಾಡಿ ನಮ್ಮ ಆಕಾಶವಾಣಿಗೆ ಹೊಸ ಹುರುಪು ಬರುತ್ತಿದೆ. ಈ ನಿಟ್ಟಿನಲ್ಲಿ ಸಂಸದ ಬಿ.ವೈ ರಾಘವೇಂದ್ರ ಅವರ ಶ್ರಮ ಅತ್ಯಂತ ಅಮೂಲ್ಯವಾದದ್ದು ಎಂದು ಶ್ಲಾಘಸಿದರು. ಈ ಸಂದರ್ಭದಲ್ಲಿ ಶಿವಮೊಗ್ಗ ಶಾಸಕರಾದ ಎಸ್.ಎನ್ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಅರುಣ್ ಬಿಜೆಪಿ ಶಿವಮೊಗ್ಗ ನಗರ ಅಧ್ಯಕ್ಷರಾದ ಜಗದೀಶ್ ಸೇರಿದಂತೆ ಪಕ್ಷದ ಅನೇಕ ಮುಖಂಡರು ಮತ್ತು ಗಣ್ಯರು ಉಪಸ್ಥಿತರಿದ್ದರು.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...