ಬೆಂಗಳೂರು : ಹಿಂದೂ ವಿವಾಹಗಳ ನೋಂದಣಿಯನ್ನು ರಾಜ್ಯ ಸರ್ಕಾರ ಸರಳೀಕರಿಸಿದ್ದು, ಆನ್ಲೈನ್ನಲ್ಲಿ ಮಾಡುವ ಮೂಲಕ ಪ್ರಕ್ರಿಯೆಯನ್ನು ಸರಳಗೊಳಿಸುವ ನಿಯಮಗಳಿಗೆ ತಿದ್ದುಪಡಿ ಮಾಡಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಈವರೆಗೆ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮಾತ್ರ ವಿವಾಹ ನೋಂದಣಿ ಕೈಗೊಳ್ಳಲಾಗುತ್ತಿತ್ತು. ಈ ಪ್ರಕ್ರಿಯೆಯನ್ನು ಇನ್ನಷ್ಟು ಸುಗಮಗೊಳಿಸಿ ಜನಸ್ನೇಹಿಯಾಗಿಸಲು ಕಾವೇರಿ-2.0 ತಂತ್ರಾಂಶದಲ್ಲಿ ಆನ್ಲೈನ್ ಮೂಲಕ ನೋಂದಣಿ ಮಾಡಲು ಮತ್ತು ಗ್ರಾಮ ಪಂಚಾಯಿತಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರ ಹಾಗೂ ಗ್ರಾಮ-1 ಕೇಂದ್ರಗಳಲ್ಲಿಯೂ ಸಹ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ.
ಹೌದು, ದಂಪತಿಗಳು ಇನ್ನುಮುಂದೆ ಸ್ವತಃ ಸಬ್-ರಿಜಿಸ್ಟ್ರಾರ್ ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲ, ಸರಳವಾಗಿ ಆನ್ ಲೈನ್ ನಲ್ಲೇ ನೋಂದಣಿ ಮಾಡಬಹುದು. ಕಾವೇರಿ 2 ಸಾಫ್ಟ್ವೇರ್ ಬಳಸಿ ಆನ್ಲೈನ್ನಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗುತ್ತದೆ. ಬಾಪೂಜಿ ಕೇಂದ್ರಗಳು, ಗ್ರಾಮ್ಒನ್ ಕೇಂದ್ರಗಳಲ್ಲಿ ಅರ್ಜಿ ಸ್ವೀಕರಿಸಲು ಅವಕಾಶ ಕಲ್ಪಿಸಲಾಗಿದೆ. ಈ ಮೊದಲು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಮಾತ್ರ ಅರ್ಜಿ ಸಲ್ಲಿಸುವ ಪದ್ದತಿ ಇತ್ತು.
ಆಧಾರ್ ಕಾರ್ಡ್ ದೃಢೀಕರಣವನ್ನು ಬಳಸಿಕೊಂಡು ವಿವಾಹ ನೋಂದಣಿ ಮಾಡಬಹುದು. ಇದು ಸಾಧ್ಯವಾಗದೇ ಇದ್ದರೆ ಆಫ್ಲೈನ್ ಮೂಲಕ ಸಬ್ ರಿಜಿಸ್ಟ್ರಾರ್ ಕಚೇರಿಗೆ ನೇರವಾಗಿ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ರಾಜ್ಯದಲ್ಲಿ ಕೇವಲ 30 ರಷ್ಟು ಮಾತ್ರ ಮದುವೆ ನೋಂದಣಿಗಳು ಆಗುತ್ತಿವೆ. ಈ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ನೋಂದಣಿ ಪ್ರಕ್ರಿಯೆಯನ್ನು ಜನ ಸ್ನೇಹಿಯಾಗಿ ಮಾಡಲಾಗುತ್ತಿದೆ.