ಬೆಂಗಳೂರು: ಪೋಲಿಸ್ ಎಂದು ಹೇಳಿಕೊಂಡು ವ್ಯಾಪಾರಿಗಳನ್ನು ಬೆದರಿಸಿ ಬೋಂಡಾ, ಬಜ್ಜಿ, ತರಕಾರಿ, ಬಿರಿಯಾನಿ ತಿನ್ನುತ್ತಿದ್ದ ಮಹಿಳೆಯನ್ನು ಕೊಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
50 ವರ್ಷದ ಲೀಲಾವತಿ ಬಂಧಿತ ಆರೋಪಿ. ಬ್ಯಾಟರಾಯನಪುರ ಕೊಡುಗೆಹಳ್ಳಿಯ ಹಲವು ವ್ಯಾಪಾರಿಗಳು ಲೀಲಾವತಿ ಕಾಟಕ್ಕೆ ಬೇಸತ್ತಿದ್ದರು. ಬ್ಯಾಟರಾಯನಪುರದ ಅಯ್ಯಪ್ಪ ಸ್ವಾಮಿ ದೇವಾಲಯ ಬಳೆ ಶುಕ್ರವಾರ ಪುಕ್ಕಟೆಯಾಗಿ ಬಜ್ಜಿ ಪಾರ್ಸೆಲ್ ಕಟ್ಟಿಸಿಕೊಳ್ಳಲು ಬಂದಿದ್ದ ವೇಳೆ ವ್ಯಾಪಾರಿಗಳು ನೀಡಿದ ಮಾಹಿತಿ ಆಧರಿಸಿ ಲೀಲಾವತಿಯನ್ನು ಬಂಧಿಸಲಾಗಿದೆ.
ಕಳೆದ ಒಂದು ವರ್ಷದಿಂದ ವ್ಯಾಪಾರಿಗಳನ್ನು ಬೆದರಿಸುತ್ತಿದ್ದ ಲೀಲಾವತಿ ಕೊಡಿಗೆಹಳ್ಳಿ, ಬ್ಯಾಟರಾಯನಪುರದಲ್ಲಿ ಬಜ್ಜಿ, ಬೋಂಡಾ, ಗೋಬಿ, ಪಾನಿಪುರಿ, ಬಿರಿಯಾನಿ, ಬೇಕರಿ ಸೇರಿದಂತೆ ತಿನಿಸು ಮಾರಾಟ ಮಾಡುವ ವ್ಯಾಪಾರಿಗಳ ಬಳಿ ಪುಕ್ಕಟೆಯಾಗಿ ತಿಂದು ಪಾರ್ಸೆಲ್ ಕಟ್ಟಿಸಿಕೊಂಡು ಹೋಗುತ್ತಿದ್ದಳು.
ಆರೋಪಿ ವಿದ್ಯಾವಂತೆಯಾಗಿದ್ದು, ಕುಟುಂಬ ಆರ್ಥಿಕವಾಗಿ ಸದೃಢವಾಗಿದೆ. ಗಂಡ ಇಂಜಿನಿಯರ್ ಆಗಿದ್ದು, ಮಗಳು ವೈದ್ಯೆ, ಮಗ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದಾನೆ. ಹೀಗಿದ್ದರೂ ಒಂದು ವರ್ಷದಿಂದ ವ್ಯಾಪಾರಿಗಳನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದಳು. ವ್ಯಾಪಾರಿಯೊಬ್ಬರು ಪೊಲೀಸ್ ಸಹಾಯವಾಣಿಗೆ(112) ಕರೆ ಮಾಡಿ ಮಾಹಿತಿ ನೀಡಿದಾಗ ಸ್ಥಳಕ್ಕೆ ಬಂದ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಈ ವೇಳೆ ನಕಲಿ ಪೊಲೀಸ್ ಎನ್ನುವುದು ಗೊತ್ತಾಗಿದೆ.